(ನ್ಯೂಸ್ ಕಡಬ) newskadaba.com, ಅ.21 ಚಿತ್ರದುರ್ಗ: ಸಂಸ್ಕೃತ ಪಾಠಶಾಲೆಯ ಅಧ್ಯಾಪಕನೊಬ್ಬ ಅಸಂಸ್ಕೃತ ಕೆಲಸ ಮಾಡಿ ಪರಾರಿಯಾಗಿದ್ದಾನೆ. ವಿದ್ಯಾರ್ಥಿಯೊಬ್ಬ ದೂರದ ಊರಿನಲ್ಲಿರುವ ಅವರ ಪೋಷಕರಿಗೆ ಬೇರೊಬ್ಬರ ಮೊಬೈಲ್ನಿಂದ ಕರೆ ಮಾಡಿದ್ದಕ್ಕೆ ಆಕ್ರೋಶಗೊಂಡ ಮುಖ್ಯ ಶಿಕ್ಷಕ ಮನಸೋಇಚ್ಛೆ ವಿದ್ಯಾರ್ಥಿ ಮೇಲೆ ಹಲ್ಲೆ) ನಡೆಸಿ ಕ್ರೌರ್ಯ ಮೆರೆದಿರುವ ಪ್ರಕರಣ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಆ ವಿದ್ಯಾರ್ಥಿಗೆ ಕಾಲಲ್ಲಿ ಒದ್ದು ವಿಕೃತಿ ಮೆರೆದಿದ್ದು, ಆ ಶಿಕ್ಷಕನ ಕ್ರೌರ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಆಕ್ರೋಶದಿಂದ ಪುಟ್ಟ ವಿದ್ಯಾರ್ಥಿ ಮೇಲೆ ಈ ರೀತಿ ಅಮಾನುಷವಾಗಿ ಶಿಕ್ಷಕ ಕ್ರೌರ್ಯ ಮೆರೆದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ಶಿಕ್ಷಕ ವೀರೇಶ್ ನಾಪತ್ತೆಯಾಗಿದ್ದಾನೆ.
ಈ ರೀತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆದ ಹಿನ್ನೆಲೆ ಸಾರ್ವಜನಿಕ ವಲಯದಿಂದ ಬಾರಿ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣ ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಅಧ್ಯಾಪಕನಿಗಾಗಿ ಶೋಧಿಸುತ್ತಿದ್ದಾರೆ.












