(ನ್ಯೂಸ್ ಕಡಬ) newskadaba.com, ಅ.21 ಬೆಂಗಳೂರು: ಶಾಲೆಗೆ ಚಕ್ಕರ್ ಹಾಕುತ್ತಿದ್ದ 5ನೇ ತರಗತಿ ವಿದ್ಯಾರ್ಥಿಯನ್ನು ಕೂಡಿ ಹಾಕಿ, ಪಿವಿಸಿ ಪೈಪ್’ನಿಂದ ಮನಬಂದಂತೆ ಅಮಾನುಷವಾಗಿ ದಂಡಿಸಿದ ಆರೋಪದ ಮೇರೆಗೆ ಖಾಸಗಿ ಶಾಲೆಯ ಪ್ರಾಂಶುಪಾಲ ಹಾಗೂ ಶಿಕ್ಷಕ ಸೇರಿದಂತೆ ಇತರರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಂಕದಕಟ್ಟೆಯ ಹೊಯ್ಸಳ ನಗರದ ನಿವಾಸಿ ದಿವ್ಯಾ (30) ಅವರು ಸುಂಕದಕಟ್ಟೆಯ ಪೈಪ್ಲೈನ್ ರಸ್ತೆಯಲ್ಲಿರುವ ನ್ಯೂ ಸೇಂಟ್ ಮೇರಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ರಾಕೇಶ್ ಕುಮಾರ್, ಶಾಲೆಯ ಮಾಲೀಕ ವಿಜಯ್ ಕುಮಾರ್ ಮತ್ತು ಶಿಕ್ಷಕಿ ಚಂದ್ರಿಕಾ ವಿರುದ್ಧ ದೂರು ದಾಖಲಿಸಿದ್ದಾರೆ.ಅಕ್ಟೋಬರ್ 14 ರಂದು ಸಂಜೆ 4 ರಿಂದ 5 ಗಂಟೆಯ ನಡುವೆ ಪ್ರಾಂಶುಪಾಲರು ಬಾಲಕನನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಮರುದಿನ ದೂರು ದಾಖಲಿಸಲಾಗಿದೆ..ಆರೋಪಿತ ಶಿಕ್ಷಕ ಹಾಗೂ ಪ್ರಾಂಶುಪಾಲರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನನ್ನ ಮಗ ಕಳೆದ ಮೂರು ವರ್ಷಗಳಿಂದ ಶಾಲೆಯಲ್ಲಿ ಓದುತ್ತಿದ್ದಾನೆ. ಶುಲ್ಕವನ್ನು ನಿಯಮಿತವಾಗಿ ಪಾವತಿಸಲಾಗುತ್ತಿದೆ ರಾಕೇಶ್ ಕುಮಾರ್ ನನ್ನ ಮಗನನ್ನು ಪ್ಲಾಸ್ಟಿಕ್ ಪಿವಿಸಿ ಪೈಪ್ನಿಂದ ಅಮಾನುಷವಾಗಿ ಹೊಡೆದಿದ್ದಾರೆ. ಇದರಿಂದ ದೇಹದಲ್ಲಿ ಹಲವು ಗಾಯಗಳಾಗಿದ್ದು, ರಕ್ತ ಹೆಪ್ಪುಗಟ್ಟಿದೆ. ಹೊಡೆತಗಳಿಂದ ಮಗು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತರಗತಿ ಶಿಕ್ಷಕಿ ಚಂದ್ರಿಕಾ ಮಗುವನ್ನು ಹಿಡಿದು ಹಲ್ಲೆಗೆ ಸಹಾಯ ಮಾಡಿದ್ದಾರೆ.












