(ನ್ಯೂಸ್ ಕಡಬ) newskadaba.com, ಅ.18: ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಇದೆ, ಖುಷಿಯಲ್ಲಿ ಊರಿಗೆ ಹೋಗಿ ಎಂಜಾಯ್ ಮಾಡಿಕೊಂಡು ಬರೋಣ, ಇಲ್ಲದಿದ್ದರೆ ನೆಂಟರು, ಬಂಧುಬಳಗದವರ ಊರುಗಳಿಗೆ ಹೋಗಿ ಖುಷಿಯಾಗಿ ನಾಲ್ಕು ದಿನ ಇದ್ದು ಬರೋಣ ಎಂದು ಅಂದುಕೊಂಡವರಿಗೆ ಖಾಸಗಿ ಬಸ್ಸುಗಳು ಯದ್ವಾತದ್ವಾ ಬೆಲೆ ಏರಿಕೆ ಮಾಡಿರುವುದು ಬಿಗ್ ಶಾಕ್ ನೀಡಿದೆ.
ದೀಪಾವಳಿ ರಜೆಗೆ ಊರು-ಪರವೂರುಗಳಿಗೆ ವಿಸ್ತೃತ ವಾರಾಂತ್ಯವನ್ನು ಕಳೆಯಲು ಬಯಸುವ ಜನರಿಂದ ಖಾಸಗಿ ಬಸ್ ನಿರ್ವಾಹಕರು ಹಣ ಸುಲಿಗೆ ಮಾಡುತ್ತಿದ್ದಾರೆ ಎನ್ನಬಹುದು. ಹಲವಾರು ಮಾರ್ಗಗಳ ಟಿಕೆಟ್ಗಳು ಈಗಾಗಲೇ ಮಾರಾಟವಾಗಿರುವುದರಿಂದ, ಅನೇಕ ಪ್ರಯಾಣಿಕರು ಕನಿಷ್ಠ ಈ ದೀಪಾವಳಿಗೆ ಉಳಿದ ಸಮಯಕ್ಕಿಂತ ಶೇಕಡಾ 60ರಷ್ಟು ಹೆಚ್ಚು ಟಿಕೆಟ್ ಬೆಲೆ ನೀಡಿ ಹೋಗಬೇಕಾಗುತ್ತಿದೆ.
ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಪ್ರಕಾರ, ಈ ಹಬ್ಬದ ಋತುವಿನಲ್ಲಿ ದರಗಳು 60-80% ರಷ್ಟು ಏರಿಕೆಯಾಗಿವೆ. ಉದಾಹರಣೆಗೆ, ಬೆಂಗಳೂರಿನಿಂದ ಹೈದರಾಬಾದ್ಗೆ ಸಾಮಾನ್ಯವಾಗಿ 1,200 ರೂ. ಬೆಲೆಯ ಎಸಿ ಸ್ಲೀಪರ್ ಟಿಕೆಟ್ ಈಗ 1,800 ರಿಂದ 2,000 ರೂ.ಗಳ ನಡುವೆ ನಿಗದಿಪಡಿಸಲಾಗಿದೆ. ಬೆಂಗಳೂರು-ಚೆನ್ನೈ ಮಾರ್ಗವು ಸಾಮಾನ್ಯವಾಗಿ 800 ರಿಂದ 900 ರೂ.ಗಳವರೆಗೆ ಇದ್ದು, 1,400 ರಿಂದ 1,500 ರೂ.ಗಳಿಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ 1,100 ರೂ. ಬೆಲೆಯ ಬೆಂಗಳೂರು-ಬೆಳಗಾವಿ ಟಿಕೆಟ್ ಈಗ 1,700 ರೂ.ಗಳಷ್ಟಿದೆ.












