ಕೆಪಿಟಿ ಸಂಸ್ಥೆಗೆ ಎಡಿಬಿ ನಿಯೋಗ ಭೇಟಿ



(ನ್ಯೂಸ್‌ ಕಡಬ) newskadaba.com ಅ.16. ಕರ್ನಾಟಕ ಸರ್ಕಾರವು ಏಷಿಯನ್ ಡೆವೆಲಪ್‍ ಮೆಂಟ್ ಬ್ಯಾಂಕ್‍ ನ (ಎಡಿಬಿ) ಸಹಯೋಗದೊಂದಿಗೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು ಅದರ ಅಂಗವಾಗಿ ರಾಜ್ಯದ ಒಂಭತ್ತು ಕಡೆಗಳಲ್ಲಿ ಉತ್ಕ್ರಷ್ಠತಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ಯೋಜನೆಯ ಭಾಗವಾಗಿ ಎಡಿಬಿಯ ನಿಯೋಗವು ಮಂಗಳೂರಿನ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಸಂಸ್ಥೆಗೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿತು. ಭೇಟಿಯ ಸಂದರ್ಭದಲ್ಲಿ ಸಂಸ್ಥೆಯ ಅಧಿಕಾರಿಗಳು ಮೂಲ ಸೌಕರ್ಯ ಹಾಗೂ ಉತ್ಕ್ರಷ್ಠತಾ ಕೇಂದ್ರದ ಸ್ಥಾಪನೆಗೆ ಸಂಬಂಧಿಸಿದ ಸಿದ್ದತೆಗಳ ವರದಿಯನ್ನು ಮಂಡಿಸಿದರು. ಬಳಿಕ ನಿಯೋಗವು ಕ್ಯಾಂಪಸ್ ಭೇಟಿ, ಕಟ್ಟಡ ಮತ್ತು ಸ್ಥಳ ಪರಿಶೀಲನೆ ಹಾಗೂ ಸಹಭಾಗಿತ್ವದ ಅಂಗವಾಗಿ ವಿವಿಧ ವಲಯಗಳ ಉದ್ಯಮಿಗಳು, ಸಂಸ್ಥೆಯ ಹಳೆ ವಿದ್ಯಾರ್ಥಿಗಳು, ಪೋಷಕರು, ಸಮೀಪದ ತಾಂತ್ರಿಕ ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು.
ಪ್ರಸ್ಥಾಪಿತ ಉತ್ಕ್ರಷ್ಠತಾ ಕೇಂದ್ರವು ಕೌಶಲ್ಯಾಭಿವೃದ್ಧಿ, ಉದ್ಯಮದ ಅವಶ್ಯಕತೆಗಳಿಗೆ ಹೊಂದಿಕೊಳ್ಳುವ ತರಬೇತಿ ಮತ್ತು ಡಿಜಿಟಲ್ ಪರಿವರ್ತನೆಗೆ ಉತ್ತೇಜನ ನೀಡುವುದು, ಸ್ಥಳೀಯ ಕೈಗಾರಿಕೆಗಳೊಂದಿಗೆ ಸಹಭಾಗಿತ್ವ ಸ್ಥಾಪಿಸುವ ಉದ್ದೇಶವನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಹರೀಶ ಶೆಟ್ಟಿ, ಕುಲಸಚಿವೆ ವಿನೋದ ಕುಮಾರಿ, ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರು ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಹರೀಶ ಸಿ. ಪಿ. ನಿಯೋಗಕ್ಕೆ ವರದಿ ಮಂಡಿಸಿದರು.





error: Content is protected !!
Scroll to Top