(ನ್ಯೂಸ್ ಕಡಬ) newskadaba.com, ಅ.04 ಸಿಂಧುದುರ್ಗ: ಒಂದೇ ಕುಟುಂಬದ ನಾಲ್ವರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಸಿಂಧುದುರ್ಗದ ಶಿರೋಡಾ-ವೇಲಗರ್ ಬೀಚ್ನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಇನ್ನು ಮೂವರು ಕಣ್ಮರೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಪಿಕ್ನಿಕ್ ಗೆಂದು ಬಂದ ಕುಟುಂಬಕ್ಕೆ ಇದು ಬಹುದೊಡ್ಡ ಆಘಾತವನ್ನು ನೀಡಿದೆ. ಮೃತರಲ್ಲಿ ಇಬ್ಬರು ಸಿಂಧುದುರ್ಗದ ಕುಡಾಲ್ ಮೂಲದವರಾಗಿದ್ದರೆ, ಇತರ 6 ಮಂದಿ ಕರ್ನಾಟಕದ ಬೆಳಗಾವಿಯಿಂದ ಬಂದಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅರೇಬಿಯನ್ ಸಮುದ್ರದಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ದುರಂತವೊಂದು ನಡೆದಿದೆ. ಒಂದೇ ಕುಟುಂಬದ ಮೂವರು ಸದಸ್ಯರು ನೀರಲ್ಲಿ ಮುಳುಗಿ ಮೃತಪಟ್ಟಿದ್ದರೆ ಇನ್ನು ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೇ ಕುಟುಂಬದ 8 ಜನರ ಕುಟುಂಬ ಪಿಕ್ನಿಕ್ಗೆಂದು ಶಿರೋಡಾ- ವೇಲಗರ್ ಬೀಚ್ಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಎಂಟು ಮಂದಿಯೂ ಒಟ್ಟಿಗೆ ಈಜಲೆಂದು ಸಮುದ್ರಕ್ಕೆ ಇಳಿದಿದ್ದಾರೆ. ಸ್ವಲ್ಪ ಸಮಯದ ಬಳಿಕ ನೀರಿನ ಆಳದಲ್ಲಿ ಒಬ್ಬೊಬ್ಬರಾಗಿ ಮುಳುಗಲು ಪ್ರಾರಂಭಿಸಿದರು. ಇವರ ರಕ್ಷಣೆಗಾಗಿ ಯಾರಿಗೂ ಧಾವಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








