ಕಣ್ಮರೆಯಾಗಿದ್ದ ಬಂಟ್ವಾಳದ ಉದ್ಯಮಿ ಮಂತ್ರಾಲಯದಲ್ಲಿ ಪತ್ತೆ; ಸುರಕ್ಷಿತವಾಗಿ ಮನೆಗೆ ಕರೆತಂದ ಪೊಲೀಸರು



(ನ್ಯೂಸ್ಕಡಬ) newskadaba.com,  ಸೆ.29 ಬಂಟ್ವಾಳ: ಮನೆಯಲ್ಲಿ ಮೊಬೈಲ್ ಫೋನ್ ಇಟ್ಟು ನಾಪತ್ತೆಯಾಗಿದ್ದ ಉದ್ಯಮಿಯೊಬ್ಬರು ಮಂತ್ರಾಲಯ ದೇವಸ್ಥಾನದ ಬಳಿ ಪತ್ತೆಯಾಗಿದ್ದು, ಬಳಿಕ ಪೊಲೀಸರು ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತಂದಿದ್ದಾರೆ.ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ ಸಜಿಪನಡದ ಕಂದೂರು ನಿವಾಸಿ, ಸದಾನಂದ (50) ಎಂದು ಗುರುತಿಸಲಾಗಿದೆ. ಅವರು ಕಂದೂರಿನಲ್ಲಿ ಎಸ್.ಕೆ. ಸುವರ್ಣ ಸೌಂಡ್ಸ್ ಅಂಡ್ ಲೈಟಿಂಗ್ ಅಂಗಡಿಯ ಮಾಲೀಕರಾಗಿದ್ದಾರೆ.





ಸೆಪ್ಟೆಂಬರ್ 16ರಂದು ಸಂಜೆ 4:30ರ ಸುಮಾರಿಗೆ ಸದಾನಂದ ಅವರು ತಮ್ಮ ಮೊಬೈಲ್ ಫೋನ್ ಅನ್ನು ಮನೆಯ ಬಳಿ ಇರುವ ಟೆಂಪೋದಲ್ಲಿ ಇಟ್ಟು ಯಾರಿಗೂ ಹೇಳದೆ ಹೊರಟು ಹೋಗಿದ್ದರು. ನಂತರ ಅವರ ಪತ್ನಿ ರೋಹಿಣಿ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.






ತನಿಖೆ ನಡೆಸುತ್ತಿದ್ದ ಪೊಲೀಸ್ ತಂಡಕ್ಕೆ ಸದಾನಂದ ಅವರ ಫೋನ್‌ನಲ್ಲಿ ಸರ್ಕಾರಿ ಬಸ್ ಟಿಕೆಟ್ ಬುಕಿಂಗ್‌ಗೆ ಸಂಬಂಧಿಸಿದ ಸಂದೇಶವೊಂದು ಕಂಡುಬಂದಿದೆ. ಈ ಸುಳಿವಿನ ಆಧಾರದ ಮೇಲೆ, ಅವರು ಮಂತ್ರಾಲಯಕ್ಕೆ ಪ್ರಯಾಣಿಸಿದ್ದಾರೆಂದು ಪೊಲೀಸರು ಪತ್ತೆಹಚ್ಚಿದರು.. ಇದೀಗ ಅವರು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.

 

.

error: Content is protected !!
Scroll to Top