(ನ್ಯೂಸ್ ಕಡಬ) newskadaba.com, ಸೆ.26 ಕುಂದಾಪುರ: ತೆಂಗಿನ ತೋಟದಲ್ಲಿ ಕಾಯಿ ಕೊಯ್ದು ಸಾಗಾಟ ಮಾಡುವ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ ಮಳೆಯಿಂದ ನೀರು ತುಂಬಿದ್ದ ತೋಡಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಬೇಳೂರು ಗ್ರಾಮದ ಚಾಮ್ತಾಡಿ ಕೈಲೇರಿ ಬಳಿ ಬುಧವಾರ ನಡೆದಿದೆ.ಮೃತರನ್ನು ಅಚ್ಲಾಡಿ ಅಂಬೇಡ್ಕರ್ ಕಾಲೋನಿಯ ನಿವಾಸಿ ಶರತ್ (32) ಎಂದು ಗುರುತಿಸಲಾಗಿದೆ.
ಶರತ್ ಅವರು ಬುಧವಾರ ತಮ್ಮ ಮನೆಯ ಸಮೀಪದ ಅಚ್ಲಾಡಿಯಲ್ಲಿ ಗುತ್ತಿಗೆದಾರರೊಬ್ಬರೊಂದಿಗೆ ತೆಂಗಿನ ತೋಟದಲ್ಲಿ ಕೆಲಸಕ್ಕೆ ತೆರಳಿದ್ದರು. ಮರದಿಂದ ತೆಂಗು ಕೊಯ್ದು ಟೆಂಪೋಗೆ ತುಂಬಿಸುವ ಕಾರ್ಯದಲ್ಲಿ ತೊಡಗಿದ್ದಾಗ, ಅವರು ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ನಂತರ ಎಲ್ಲೆಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಬುಘವಾರ ವಿಪರೀತ ಮಳೆ ಇದ್ದ ಕಾರಣ ತೋಡು ತುಂಬಿ ಹರಿಯುತ್ತಿತ್ತು.ಗುರುವಾರ ಮಧ್ಯಾಹ್ನ ಕೈಲೇರಿ ಸಮೀಪದ ತೋಡಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಟೆಂಪೋಗೆ ತೆಂಗಿನಕಾಯಿಗಳನ್ನು ಸಾಗಿಸುವ ವೇಳೆ ಶರತ್ ಆಕಸ್ಮಿಕವಾಗಿ ಕಾಲು ಜಾರಿ, ಯಾರ ಗಮನಕ್ಕೂ ಬಾರದೆ ತೋಡಿಗೆ ಬಿದ್ದು, ಮುಳುಗಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.ತೋಟವು ಹೊಳೆಯ ಪಕ್ಕದಲ್ಲೇ ಇದ್ದ ಕಾರಣ, ಬುಧವಾರ ತಡರಾತ್ರಿವರೆಗೂ ಹೊಳೆಯ ಬಳಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಗುರುವಾರವೂ ಶೋಧ ಮುಂದುವರೆಸಿ, ಅಂತಿಮವಾಗಿ ಮೃತದೇಹ ಪತ್ತೆಯಾಯಿತು. ಈಶ್ವರ್ ಮಲ್ಪೆ, ಅಗ್ನಿಶಾಮಕ ದಳದ ತಂಡ ಹಾಗೂ ಸ್ಥಳೀಯ ಸ್ವಯಂಸೇವಕರಾದ ನಾಗರಾಜ್ ಜೀವನ್ ಮಿತ್ರ ಸೇರಿದಂತೆ ಹಲವರು ಶೋಧ ಕಾರ್ಯಾಚರಣೆಯಲ್ಲಿ ನೆರವು ನೀಡಿದರು.
ಮೃತರು ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಕೆಲವು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಶರತ್, ಇತ್ತೀಚೆಗೆ ತಮ್ಮ ಸಹೋದರಿಯ ಮದುವೆ ಮಾಡಿಸಿದ್ದರು ಮತ್ತು ತಮ್ಮ ತಾಯಿಗೆ ಆಸರೆಯಾಗಿದ್ದ ಏಕೈಕ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ಮರಣವು ಕುಟುಂಬಕ್ಕೆ ತೀವ್ರ ದುಃಖ ಉಂಟುಮಾಡಿದೆ.








