ಮುಂಬೈನ ಯುವ ಆಟಗಾರರೊಂದಿಗೆ ಬ್ಯಾಟಿಂಗ್‌ ಅಭ್ಯಾಸ ನಡೆಸಿದ ರೋಹಿತ್‌



(ನ್ಯೂಸ್‌ ಕಡಬ) newskadaba.com,  ಸೆ.17 ಬೆಂಗಳೂರು: ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಗಾಗಿ ನಾಯಕ ರೋಹಿತ್‌ ಶರ್ಮ ಅವರು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಮುಂಬೈನ ಯುವ ಆಟಗಾರರೊಂದಿಗೆ ತರಬೇತಿಯಲ್ಲಿ ನಿರತರಾಗಿದ್ದಾರೆ. ಟಿ20 ಮತ್ತು ಟೆಸ್ಟ್‌ಗಳಿಂದ ನಿವೃತ್ತರಾದ ನಂತರ, 38 ವರ್ಷದ ರೋಹಿತ್ ಶರ್ಮಾ ಕೇವಲ 50 ಓವರ್‌ಗಳ ಸ್ವರೂಪದ ಮೇಲೆ ಮಾತ್ರ ಗಮನಹರಿಸುತ್ತಿದ್ದಾರೆ.





ಅಭ್ಯಾಸದ ವೇಳೆ ರೋಹಿತ್‌ ಅವರು ಯುವ ಆಟಗಾರರಾ ಸರ್ಫರಾಜ್‌ ಖಾನ್‌ ಮತ್ತು ಆಯುಷ್ ಮ್ಹಾತ್ರೆಗೆ ಹಲವು ಬ್ಯಾಟಿಂಗ್‌ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ 19 ವರ್ಷದ ಆಯುಷ್ ಮ್ಹಾತ್ರೆಗೆ ಉಡುಗೊರೆಯಾಗಿ ರೋಹಿತ್‌ ತಮ್ಮ ಬ್ಯಾಟೊಂದನ್ನು ನೀಡಿದರು. ಇದರ ಫೋಟೊವನ್ನು ಮ್ಹಾತ್ರೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇದು ಕೇವಲ ಉಡುಗೊರೆಯಲ್ಲ, ಸ್ಫೂರ್ತಿ. ಈ ಬ್ಯಾಟ್‌ ಒಂದು ಆಶೀರ್ವಾದ ಮತ್ತು ಜೀವಮಾನದ ನೆನಪು’ ಎಂದು ಧನ್ಯವಾದ ತಿಳಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಅಬ್ಬರದ ಬ್ಯಾಟಿಂಗ್‌ ಮೂಲಕ ಗಮನಸೆಳೆದಿದ್ದ ವೇಳೆ ಆಯುಷ್ ಮ್ಹಾತ್ರೆಯ ಸಾಧನೆಯನ್ನು ರೋಹಿತ್‌ ಕೊಂಡಾಡಿದ್ದರು.






ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಬಳಿಕ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಆಡದ ರೋಹಿತ್‌, ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಪಂದ್ಯವನ್ನು ರೋಹಿತ್ ಆಡುವ ಸಾಧ್ಯತೆಯಿದೆ.

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವ ಮೊದಲು, ರೋಹಿತ್ ಮತ್ತು ವಿರಾಟ್ ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಮೂರು ಪಂದ್ಯಗಳಲ್ಲಿ ಭಾರತ ಎ ತಂಡದ ಪರ ಆಡಲಿದ್ದಾರೆ ಎಂದು ಕೆಲವು ವಾರಗಳ ಹಿಂದೆ ವರದಿಯಾಗಿತ್ತು. ಆದರೆ, ಭಾನುವಾರ ಬಿಸಿಸಿಐ ಘೋಷಿಸಿದ ತಂಡದಲ್ಲಿ ಅವರನ್ನು ಹೆಸರಿಸಲಾಗಿಲ್ಲ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಅಕ್ಟೋಬರ್ 19 ರಂದು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮುಂದಿನ ಎರಡು ಪಂದ್ಯಗಳು ಅಕ್ಟೋಬರ್ 23 ಮತ್ತು 25 ರಂದು ಕ್ರಮವಾಗಿ ಅಡಿಲೇಡ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ.

error: Content is protected !!
Scroll to Top