ಎಂಟರ ಹರೆಯದ ಬಾಲಕಿ ಆಸಿಫಾಳ ಹತ್ಯೆ ಪ್ರಕರಣ ► ಕಡಬ ವಲಯ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ತಾಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಎ.20. ಇತ್ತೀಚೆಗೆ ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದ ಎಂಟರ ಬಾಲೆ ಆಸಿಫಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಎಸ್ಕೆಎಸ್ಸೆಸ್ಸೆಫ್‌ ಕಡಬ ವಲಯದ ವತಿಯಿಂದ ಕಡಬ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆಯು ಶುಕ್ರವಾರ ಅಪರಾಹ್ನ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೇರಳದ ಜಾಮಿಯಾ ನೂರಿಯಾ ಅರೇಬಿಯಾ ವಿದ್ಯಾರ್ಥಿ ನಹೀಮ್ ಮುಕ್ವೆ ಮಾತನಾಡಿ, ದೇಶದಲ್ಲಿ ಅಮಾಯಕ ಹೆಣ್ಣುಮಕ್ಕಳು ದಿನನಿತ್ಯ ಲೈಂಗಿಕ ಶೋಷಣೆಗೊಳಗಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಬೇಕಿದೆ. ಹೆಣ್ಣುಮಕ್ಕಳನ್ನು ರಕ್ಷಿಸಬೇಕಾದ ಸರಕಾರವೇ ಆರೋಪಿಗಳಿಗೆ ರಕ್ಷಣೆಯನ್ನು ನೀಡುತ್ತಿದೆ. ಈ ದೇಶದ ಸಬಲೀಕರಣಕ್ಕಾಗಿ ಮಹಿಳೆಯರಿಗೆ ಮೀಸಲಾತಿ ನೀಡುತ್ತಿರುವ ಈ ಸಂದರ್ಭದಲ್ಲಿ ಯಾರಿಗಾಗಿ ಮೀಸಲಾತಿ ನೀಡುತ್ತಿದ್ದೀರಿ…? ಬದುಕಲು ನಿರಾಕರಿಸಲ್ಪಟ್ಟ ಮಹಿಳೆಯರಿಗೆ ಯಾಕಾಗಿ ಮೀಸಲಾತಿ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು ಹೆಣ್ಮಕ್ಕಳಿಗಾಗಿ ಸುಂದರವಾದ ಘೋಷ ವಾಕ್ಯಗಳನ್ನು ಹೇಳುವ ಬದಲು ಆಸಿಫಾಳ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದರು. ರಹ್ಮಾನಿಯಾ ಟೌನ್‌ ಜುಮಾ ಮಸೀದಿಯ ಅಧ್ಯಕ್ಷರಾದ ಎಸ್. ಅಬ್ದುಲ್ ಖಾದರ್, ಖತೀಬರಾದ ಇಬ್ರಾಹಿಂ ದಾರಿಮಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್‌ ಕಡಬ ವಲಯದ ಎಲ್ಲಾ ಕ್ಲಸ್ಟರ್ ಮಟ್ಟದ ಪದಾಧಿಕಾರಿಗಳು,‌ ಕಾರ್ಯಕರ್ತರು ಸೇರಿದಂತೆ ನೂರಾರು‌ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆರೋಪಿಗಳಿಗೆ ಕಠಿಣೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಕಡಬ ತಾಲೂಕು ಕಛೇರಿಯ ಪ್ರಭಾರ ಉಪ ತಹಶೀಲ್ದಾರ್ ಶ್ರೀಮತಿ ಭಾರತಿಯವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಕಡಬ ಪೊಲೀಸರು ಸೂಕ್ತ ಬಂದೋಬಸ್ತ್ ವಹಿಸಿದ್ದರು.

Also Read  ಪ್ರಮೋದ್ ಮುತಾಲಿಕ್ ಗೆ ಬೆದರಿಕೆ ಕರೆ ಹಿನ್ನೆಲೆ ➤ ಪುತ್ತೂರಿನ ಯುವಕನ ವಿರುದ್ದ ಪ್ರಕರಣ ದಾಖಲು

error: Content is protected !!
Scroll to Top