ಬೆಳ್ತಂಗಡಿ: ಅಂತರ್ ರಾಜ್ಯ ದನದ ಮಾಂಸ ಸಾಗಾಟ ಪತ್ತೆ ಹಚ್ಚಿದ ಡಿಸಿಐಬಿ ಪೊಲೀಸರು ► 850 ಕೆಜಿ ಮಾಂಸ ಸಹಿತ 14.25 ಲಕ್ಷ ಮೌಲ್ಯದ ಸ್ವತ್ತುಗಳೊಂದಿಗೆ ಐವರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.17. ಅಂತರ್ ರಾಜ್ಯ ಅಕ್ರಮ ದನದ ಮಾಂಸ ಸಾಗಾಟದ ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಡಿಸಿಐಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಎರಡು ಕಾರುಗಳ ಸಹಿತ 850 ಕೆಜಿ ದನದ ಮಾಂಸವನ್ನು ವಶಪಡಿಸಿಕೊಂಡ ಘಟನೆ ಸೋಮವಾರದಂದು ನಡೆದಿದೆ.

 

ಬಂಧಿತ ಆರೋಪಿಗಳನ್ನು ಕುದ್ರೋಳಿ ಕರ್ಬಳ ರಸ್ತೆ ನಿವಾಸಿ ದಿ| ಹಮೀದ್ ಎಂಬವರ ಪುತ್ರ ಮುಸ್ತಾಕ್, ಕಲ್ಲಡ್ಕದ ಗೋಳ್ತಮಜಲು ನಿವಾಸಿ ಕಾದರ್ ಎಂಬವರ ಪುತ್ರ ಮಹಮ್ಮದ್ ಕಬೀರ್, ತುಂಬೆಯ ರಾಮಲ್ ಕಟ್ಟೆ ನಿವಾಸಿ ದಿ| ಇಬ್ಬಿ ಬ್ಯಾರಿ ಎಂಬವರ ಪುತ್ರ ಅಬ್ದುಲ್ ಜಬ್ಬಾರ್ ಹಾಗೂ ಇನ್ನೊಂದು ಪ್ರಕರಣದ ಬಂಧಿತರನ್ನು ಬಂಟ್ವಾಳ ಕಾರಿಂಜದ ಆಲಿಕುಂಞಿ ಎಂಬವರ ಪುತ್ರ ಅಶ್ರಫ್ ಹಾಗೂ ಬಂದರಿನ ಸಿ.ಎ. ಅಪಾರ್ಟ್‌ಮೆಂಟ್ ನಿವಾಸಿ ಜಿ.ಮಹಮ್ಮದ್ ಎಂಬವರ ಪುತ್ರ ರಝೀಮ್ ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ಬಿ.ಆರ್. ರವಿಕಾಂತೇಗೌಡರವರ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್ ವೈ. ನಾಯ್ಕ್ ರವರ ನೇತೃತ್ವದಲ್ಲಿ ಡಿಸಿಐಬಿ ಸಿಬ್ಬಂದಿಗಳು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಗುರುವಾಯನಕೆರೆ ಜಂಕ್ಷನ್ ಬಳಿ ತಲುಪಿದಾಗ ಬೆಳ್ತಂಗಡಿ ಕಡೆಯಿಂದ ಒಂದು ಮಹಿಂದ್ರ ಝೈಲೋ ಕಾರು ಬರುತ್ತಿದ್ದುದನ್ನು ನಿಲ್ಲಿಸಿ ಪರಿಶೀಲಿಸಿದಾಗ ಅಕ್ರಮವಾಗಿ ದನದ ಮಾಂಸ ಸಾಗಾಣಿಕೆ ಪ್ರಕರಣ ಕಂಡುಬಂದಿದೆ. ಮೂವರು ಆರೋಪಿಗಳನ್ನು ಬಂಧಿಸಿ 450 ಕೆಜಿ ಮಾಂಸವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ನಂತರ ಕುಕ್ಕೇಡಿ ಎಂಬಲ್ಲಿ ಗುರುವಾಯನಕೆರೆಯಿಂದ ಬಂದ ಮಹಿಂದ್ರ ಬೊಲೆರೋ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲೂ ಅಕ್ರಮವಾಗಿ ದನದ ಮಾಂಸ ಸಾಗಾಣಿಕೆ ಮಾಡುತ್ತಿದ್ದುದು ಕಂಡುಬಂದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ 400 ಕೆಜಿ ಮಾಂಸವನ್ನು ವಶಕ್ಕೆ ಪಡೆದು ಪ್ರಕರಣದಲ್ಲಿ ವೇಣೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಎರಡು ಪ್ರಕರಣಗಳಲ್ಲಿ ಐದು ಜನ ಆರೋಪಿಗಳನ್ನು ಬಂಧಿಸಿದ್ದು, ಒಂದು ಮಹಿಂದ್ರ ಝೈಲೋ, ಒಂದು ಮಹಿಂದ್ರ ಬೊಲೋರೊ ವಾಹನ ಮತ್ತು ಸುಮಾರು 850 ಕೆಜಿ ದನದ ಮಾಂಸ, ಐದು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಡು ಮೌಲ್ಯ ಸುಮಾರು 14.25/- ಲಕ್ಷ ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್ ವೈ. ನಾಯಕ್, ಸಿಬ್ಬಂದಿಗಳಾದ ವಾಸು ನಾಯ್ಕ್, ಲಕ್ಷ್ಮಣ ಕೆ.ಜಿ., ಉದಯ ರೈ, ಪ್ರವೀಣ ಕೆ., ಇಕ್ಬಾಲ್ ಎ.ಇ., ತಾರನಾಥ ಎಸ್., ಪಳನಿವೇಲು ಮತ್ತು ಚಾಲಕ ವಿಜಯಗೌಡ ಭಾಗವಹಿಸಿದ್ದರು.

error: Content is protected !!

Join the Group

Join WhatsApp Group