(ನ್ಯೂಸ್ ಕಡಬ) newskadaba.com ಮಂಗಳೂರು, ಆ. 26. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ದ.ಕ. ಜಿಲ್ಲೆ ಮತ್ತು ಕೆಪೆಕ್ ಸಂಸ್ಥೆ, ಬೆಂಗಳೂರು ಇವರ ಸಹಯೋಗದೊಂದಿಗೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ ಕುರಿತು ಸೆಪ್ಟೆಂಬರ್ 3 ರಂದು ಬೆಳಗ್ಗೆ 10 ಗಂಟೆಗೆ ಒಂದು ದಿನದ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆ/ಅಭಿವೃದ್ದಿ ಯೋಜನೆಯಡಿಯಲ್ಲಿ ಶೇ.50ರಷ್ಟು ಅಥವಾ ಗರಿಷ್ಟ ರೂ.15 ಲಕ್ಷ ಸಹಾಯಧನ (ಕೇಂದ್ರ ಸರ್ಕಾರದ ರೂ.6 ಲಕ್ಷ ಹಾಗೂ ರಾಜ್ಯ ಸರ್ಕಾರದ ವತಿಯಿಂದ ರೂ.9 ಲಕ್ಷ ಸಹಾಯಧನ ನೀಡಿಕೆ). ವೈಯುಕ್ತಿಕ ಕಿರು ಉದ್ದಿಮೆಗಳಿಗೆ ಹಾಗೂ ರೈತ ಉತ್ಪಾದಕ ಸಂಸ್ಥೆಗಳು (FPO)/ ಉತ್ಪಾದಕಾ ಸೊಸೈಟಿಗಳಿಗೆ ಸಹಾಯಧನ- ಪ್ರತಿ ಘಟಕಕ್ಕೆ ಶೇ.35ರಷ್ಟು (ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಪಾತ 60:40) ಮೌಲ್ಯದ ಸಾಲ ಸಂಪರ್ಕವಿರುವ ಸಹಾಯಧನ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಶೇ.15 ರಷ್ಟು ಹೆಚ್ಚುವರಿ ಸಹಾಯಧನ. (ಒಟ್ಟು ಸಹಾಯಧನ ಗರಿಷ್ಟ ರೂ.15 ಲಕ್ಷ) ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ಕಾರ್ಯ ನಿರ್ವಹಣಾ ಬಂಡವಾಳ ಹಾಗೂ ಚಿಕ್ಕ ಸಲಕರಣೆಗಳನ್ನು ಖರೀದಿಸಲು ರೂ.40000 ಪ್ರಾಥಮಿಕ ಬಂಡವಾಳ ನೀಡಿಕೆ ಈ ಯೋಜನೆಯ ಪ್ರಮುಖ ಘಟಕಗಳಾಗಿದ್ದು ಸಹಾಯಧನದೊಂದಿಗೆ ಶೇ.3 ರಷ್ಟು ಬಡ್ಡಿ ಸಹಾಯಧನದ ಸೌಲಭ್ಯವಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರು/ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಜಿಲ್ಲೆಯ ಎಲ್ಲಾ ರೈತರು/ ಉದ್ದಿಮೆದಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









