(ನ್ಯೂಸ್ ಕಡಬ) newskadaba.com, ಆ.21: ಬೆಳಗ್ಗೆ ಎದ್ದ ನಂತರ ಒಂದಷ್ಟು ಮಂದಿ ದಿನಗಳನ್ನು ಪಾಲಿಸುತ್ತಾರೆ. ಕೆಲವರು ಮೊಬೈಲ್ ನೋಡುತ್ತಾ ಕುಳಿತರೆ, ಇನ್ನೂ ಕೆಲವು ಮಂದಿ ತಮ್ಮ ದಿನವನ್ನು ಜಡತ್ವದಿಂದ ಆರಂಭಿಸುತ್ತಾರೆ. ಜಡತ್ವದ ದಿನಚರಿಗಳು ನಿಮ್ಮ ದಿನವನ್ನು ಹಾಳು ಮಾಡುತ್ತದೆ ಅಲ್ಲದೇ, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಗ್ಗಿನ ಹೊತ್ತು ನೀವು ಈ ಅಭ್ಯಾಸಗಳನ್ನು ಮಾಡುತ್ತಿದ್ದರೆ, ಇಂದೇ ಅದನ್ನು ಬಿಟ್ಟುಬಿಡಿ.
ಅನೇಕ ಮಂದಿ ಎದ್ದ ಕೂಡಲೇ ಮೊಬೈಲ್ ನೋಡುತ್ತಾರೆ ಹಾಗೂ ಗಂಟೆಗಟ್ಟಲೆ ಮೊಬೈಲ್ ನೋಡುತ್ತಲೇ ಕುಳಿತು ಬಿಡುತ್ತಾರೆ. ಈ ಅಭ್ಯಾಸ ಒಳ್ಳೆಯದಲ್ಲ. ಇದು ನಮ್ಮ ನೆಮ್ಮದಿಯನ್ನು ಕೆಡಿಸುವುದರೊಂದಿಗೆ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಹಾಗಾಗಿ ಎದ್ದ ಕೂಡಲೇ ಮೊಬೈಲ್ ನೋಡುವ ಅಭ್ಯಾಸವನ್ನು ಇಟ್ಟುಕೊಳ್ಳಬೇಡಿ.
ಕಾಲೇಜು, ಆಫೀಸ್ಗೆ ತಡವಾಗುತ್ತದೆ ಎಂದು ಅದೆಷ್ಟೋ ಮಂದಿ ಬೆಳಗ್ಗಿನ ಉಪಹಾರವನ್ನು ಸೇವನೆ ಮಾಡುವುದಿಲ್ಲ. ಇದು ಒಳ್ಳೆಯ ಅಭ್ಯಾಸವಲ್ಲ. ಇದು ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಹಾಗಾಗಿ ಬೆಳಗ್ಗಿನ ವೇಳೆ ಆರೋಗ್ಯಕರ, ಪೌಷ್ಠಿಕಾಂಶಯುಕ್ತ ಉಪಹಾರ ಸೇವಿಸುವುದು ಒಳ್ಳೆಯದು.
ಬೆಳಗ್ಗೆ ಎದ್ದ ಬಳಿಕ ನೀರು ಕುಡಿಯದೇ ಇರುವುದು ಒಳ್ಳೆಯದಲ್ಲ. ಏಕೆಂದರೆ, ರಾತ್ರಿ ಮಲಗಿದ ಬಳಿಕ ದೇಹವು ಸ್ವಲ್ಪ ನಿರ್ಜಲೀಕರಣಗೊಳ್ಳುತ್ತದೆ. ಇದರಿಂದ ಕೆಲವೊಮ್ಮೆ ಬೆಳಗ್ಗೆ ಆಯಾಸ ಎನಿಸಬಹುದು. ಹಾಗಾಗಿ, ನೀವು ಎದ್ದ ಕೂಡಲೇ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಒಳ್ಳೆಯದು.
ಕೆಲವು ಮಂದಿ ಬೆಳಗ್ಗೆ ಎದ್ದ ಕೂಡಲೇ ನಕಾರಾತ್ಮಕ ಆಲೋಚನೆಗಳ ಬಗ್ಗೆ ಸ್ವಚರ್ಚೆ ಮಾಡುತ್ತಾರೆ. ಇದು ನಮ್ಮ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಬೆಳಗ್ಗೆ ನೀವು ಏನು ಯೋಚಿಸುತ್ತೀರಿ ಎನ್ನುವುದು ನಿಮ್ಮ ಭಾವನೆಯ ಮೇಲೆ ಪ್ರತಿಫಲಿಸುತ್ತದೆ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಸಕಾರಾತ್ಮಕವಾಗಿ ಯೋಚಿಸಿ.
ಜಡ ಜೀವನಶೈಲಿಯು ಆರೋಗ್ಯದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ದೈಹಿಕ ಚಟುವಟಿಕೆಗಳ ಕೊರತೆಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಬೆಳಗ್ಗೆ ಎದ್ದ ಬಳಿಕ ಯೋಗ, ಧ್ಯಾನ, ವ್ಯಾಯಾಮಗಳನ್ನು ಮಾಡಿ.












