(ನ್ಯೂಸ್ ಕಡಬ) newskadaba.com, ಆ.18: ಒಂದು ಕಾಲದ ಬೀದಿ ರೌಡಿ, ಕೊತ್ವಾಲ್ಪುರದ ಶಿಷ್ಯ, ಚಮಚಾಗಿರಿ ಮಾಡಿ, ಕಂಡವರ ಮನೆ ಬಾಗಿಲು ಕಾಯ್ದು ರಾಜಕೀಯ ಸ್ಥಾನಮಾನ ಗಿಟ್ಟಿಸಿಕೊಂಡ ಬಿ.ಕೆ ಹರಿಪ್ರಸಾದ್ ಇಂದು ಖಾದಿ ಬಟ್ಟೆ ಹಾಕಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡ ಬಿಜೆಪಿ, ಬಿ. ಕೆ. ಹರಿಪ್ರಸಾದ್ ಅವರಿಗೆ ಪ್ರಧಾನಿ ಮೋದಿ, ಆರ್ಎಸ್ಎಸ್ ವಿರುದ್ಧ ಮಾತನಾಡಿಯೇ ರಾಜಕೀಯ ಸ್ಥಾನಮಾನ ಗಿಟ್ಟಿಸಬೇಕೇ ಹೊರತು ಬೇರೆ ಆಯ್ಕೆಗಳಿಲ್ಲ. ಸಂಘಟನೆಯೂ ಗೊತ್ತಿಲ್ಲ, ಜನಾಧಿಕಾರ ಪಡೆದೂ ಗೊತ್ತಿಲ್ಲ, ಗೊತ್ತಿರುವುದು ಹಿಂಬಾಗಿಲ ರಾಜಕಾರಣವೊಂದೇ ಎಂದು ಹೇಳಿದೆ.
ಆರ್ಎಸ್ಎಸ್ ಎಂದರೆ ನಿಮ್ಮ ಕತ್ತಲ ಸಾಮ್ರಾಜ್ಯದಂತಲ್ಲ, ಅದು ಬೆಳಕಿನ ಸಾಮ್ರಾಜ್ಯ, ಜ್ಞಾನ ದೀವಿಗೆಯ ಸಾಮ್ರಾಜ್ಯ, ರಾಷ್ಟ್ರವನ್ನು ಆರಾಧಿಸುವ ಸಾಮ್ರಾಜ್ಯ. ಪಾಕಿಸ್ಥಾನವನ್ನು ಆರಾಧಿಸುವ ಬಿ.ಕೆ. ಹರಿಪ್ರಸಾದರಿಗೆ ಆರ್ಎಸ್ಎಸ್ ಪಥ್ಯವಾಗದಿರುವುದರಲ್ಲಿ ಅತಿಶಯವಿಲ್ಲ, ಪಾಕಿಸ್ಥಾನದ ಉಗ್ರರಿಗೂ ಆರ್ಎಸ್ಎಸ್ ಮೇಲೆ ಕೆಂಡದಂತಹ ದ್ವೇಷವಿದೆ ಎಂದು ಕಿಡಿಕಾರಿದೆ.













