ನ್ಯೂಸ್ ಕಡಬ) newskadaba.com, ಆ.16: ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಮೂಲಸೌಕರ್ಯ ಯೋಜನೆ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾಗ ಸುರಂಗ ರಸ್ತೆ ಯೋಜನೆಯ ಬಗ್ಗೆ ಮನವಿ ಸಲ್ಲಿಸುವಂತೆ ಹೇಳಿದರು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗುರುವಾರ ವಿಧಾನ ಪರಿಷತ್ ಗೆ ತಿಳಿಸಿದ್ದಾರೆ.
ಇಂದು ವಿಧಾನ ಪರಿಷತ್ನಲ್ಲಿ ಬೆಂಗಳೂರಿನ ಮಹತ್ವಾಕಾಂಕ್ಷಿ ಸುರಂಗ ರಸ್ತೆ ಯೋಜನೆ ತೀವ್ರ ಚರ್ಚೆಗೆ ಗ್ರಾಸವಾಯಿತು. ಇದು ಹಣ ಹೊಡೆಯುವ ಯೋಜನೆಯಲ್ಲ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ‘ಸಾಕ್ಷಿ ಗುಡ್ಡೆ’ ಬಿಟ್ಟು ಹೋಗುವ ನನ್ನ ಕನಸು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ಮತ್ತು ನಿತಿನ್ ಗಡ್ಕರಿಯವರೇ ನನಗೆ ಬೆಂಬಲ ಸೂಚಿಸಿದ್ದಾರೆ ಎಂದ ಡಿಕೆ ಶಿವಕುಮಾರ್ ಅವರು ಹೇಳಿದರು. ಈ ವೇಳೆ ಸಿ.ಟಿ. ರವಿ ಅವರು ‘ಲಾಭವಿಲ್ಲದೆ ಡಿಕೆಶಿ ಏನೂ ಮಾಡಲ್ಲ’ ಎಂದರು. ‘ಲಾಭ ನೋಡೋನು ನೀನು, ನಾನು ಪಕ್ಷದ ಹೆಸರು ನೋಡುವವನು’ ಎಂದು ಖಾರವಾಗಿಯೇ ತಿರುಗೇಟು ನೀಡಿದರು.
ಸುರಂಗ ರಸ್ತೆ ಯೋಜನೆ, ಅದರ ಕಾರ್ಯಸಾಧ್ಯತೆ, ಡಿಪಿಆರ್ನಲ್ಲಿನ ದೋಷ ಕುರಿತು ಬಿಜೆಪಿ ಸದಸ್ಯ ಸಿ.ಟಿ. ರವಿ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ರಾಗಿಗುಡ್ಡ ಡಬಲ್ ಡೆಕ್ಕರ್ ಯೋಜನೆಯಿಂದ ಪ್ರಧಾನಿ ಪ್ರಭಾವಿತರಾಗಿದ್ದಾರೆ ಮತ್ತು ಮುಂದುವರಿಯುವಂತೆ ಸೂಚಿಸಿದರು ಎಂದು ತಿಳಿಸಿದರು.













