(ನ್ಯೂಸ್ ಕಡಬ) newskadaba.com, ಆ.05: ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ. ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡೆಯದೇ ನೌಕರರ ಬೇಡಿಕೆಯನ್ನು ಈಡೇರಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಮಹಿಳೆಯರಿಗೆ ಈ ಸರ್ಕಾರ ಉಚಿತ ಬಸ್ ಎಂದು ಹೇಳಿತ್ತು. ಇಂದು ಫ್ರೀ ಬಸ್ ಕಟ್ ಆಗಿದೆ. ಸರ್ಕಾರ ಪಾಪರ್ ಆಗಿಲ್ಲ, ನಮ್ಮ ಬಳಿ ಹಣ ಕೊಳೆಯುತ್ತಿದೆ, ಖಜಾನೆ ತುಂಬಿ ಆಚೆ ಹೋಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು. ಮಿಸ್ಟರ್ ಸಿದ್ದರಾಮಯ್ಯ ಅವರೇ, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಶೇ.15ರಷ್ಟು ಸಂಬಳ ಜಾಸ್ತಿ ಮಾಡಿದ್ದೆವು. ಸುಮಾರು 480 ಕೋಟಿ ಹಣ ಕೊಟ್ಟಿದ್ದೆವು ಎಂದಿದ್ದಾರೆ.
ನಾವು ಆಗ ಹೈಕ್ ಕೊಟ್ಟಿರಲಿಲ್ಲ. ಈಗ ನೀವು ಕೊಡಿ. ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡಿಯಬೇಡಿ. ಸಿದ್ದರಾಮಯ್ಯ ಅವರು ನಿದ್ರೆ ಮಾಡುವುದನ್ನು ಬಿಟ್ಟು ನೌಕರರ ಸಭೆ ಮಾಡಿ ಸಮಸ್ಯೆಗೆ ಪರಿಹಾರ ನೀಡಿ. ನಿಮ್ಮಿಂದ ಸಮಸ್ಯೆಗೆ ಪರಿಹಾರ ನೀಡಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ ಎಂದು ಆಗ್ರಹಿಸಿದ್ದಾರೆ.













