ಹೃದಯಾಘಾತದಿಂದ ಸರ್ಕಾರಿ ವೈದ್ಯ, ಗ್ರಾ.ಪಂ ಅಧ್ಯಕ್ಷ ಸಾವು !



(ನ್ಯೂಸ್‌ ಕಡಬ) newskadaba.com ಜು.01: ಕಳೆದ ಒಂದೇ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ 19 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈಗ ಶಿವಮೊಗ್ಗದಲ್ಲಿ ಸರ್ಕಾರಿ ವೈದ್ಯ ಹಾಗೂ ತುಮಕೂರಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.







ಶಿವಮೊಗ್ಗದ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿದ್ದ ಡಾ.ಸಂದೀಪ್ ಅವರು ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದರು.






ಶುಕ್ರವಾರ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳಿದ ನಂತರ ಇವರಿಗೆ ರಾತ್ರಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಹೊರವಲಯದ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇವರಿಗೆ ಪತ್ನಿ‌ ಹಾಗೂ ಇಬ್ಬರು ಮಕ್ಕಳಿದ್ದಾರೆ. ಡಾ.ಸಂದೀಪ್ ಚಿತ್ರದುರ್ಗ ಜಿಲ್ಲೆ‌ಯ ಚಿಕ್ಕಜಾಜೂರು ಮೂಲದವರು. ಶಿವಮೊಗ್ಗ ಹೊರವಲಯ ಪುರಲೆಯಲ್ಲಿ‌ ಮನೆ ಮಾಡಿಕೊಂಡಿದ್ದರು.

ಡಾ.ಸಂದೀಪ್ ಕಳೆದ 8 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದು, ಜನಾನುರಾಗಿಯಾಗಿದ್ದರು. ಆಸ್ಪತ್ರೆ ಸಿಬ್ಬಂದಿ‌ ಕಂಬನಿ ಮಿಡಿದಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಊರುಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಬ್ಬಾಕ ಸ್ವಾಮಿ (36) ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ಇವರು ಬಿಜೆಪಿ ಯುವಮೋರ್ಚಾ ಮುಖಂಡರೂ ಆಗಿದ್ದರು. ತುಮಕೂರು ನಗರದಲ್ಲಿರುವ ಕೋತಿ ತೋಪಿನಲ್ಲಿರುವ‌ ಶಾಲೆಗೆ ಮಗಳನ್ನು ಬಿಟ್ಟು ಆಗಷ್ಟೇ ಮನೆಗೆ ಬಂದಿದ್ದರು. ಮನೆಯಲ್ಲಿ ತಲೆ‌ಸುತ್ತಿ ಬಿದ್ದಿದ್ದಾರೆ. ತಕ್ಷಣ ಸಿದ್ಧಗಂಗಾ‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

error: Content is protected !!
Scroll to Top