(ನ್ಯೂಸ್ ಕಡಬ) newskadaba.com ಜೂ.21: ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಭಾರತೀಯ ನಾಗರೀಕ ವಿಮಾನಯಾನ ಸೇವೆ ತೀವ್ರ ಸಂಕಷ್ಟ ಎದುರಿಸುತ್ತಿದೆ. ತಾಂತ್ರಿಕ ಸಮಸ್ಯೆ, ಹವಾಮಾನ ವೈಪರಿತ್ಯ ಸೇರಿದಂತೆ ಹಲವು ಕಾರಣಗಳಿಂದ ವಿಮಾನ ಸೇವೆಗಳು ರದ್ದಾಗುತ್ತಿದೆ. ಇದೀಗ ಗೌವ್ಹಾಟಿ-ಚೆನ್ನೈ ಇಂಡಿಗೋ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ವರ್ಶ ಮಾಡಿದ ಘಟನೆ ನಡೆದಿದೆ. ಗೌವ್ಹಾಟಿಯಿಂದ ಹೊರಟ ವಿಮಾನ ಕೆಲ ಹೊತ್ತಿನ ಬಳಿಕ ಪೈಲೆಟ್ ಅಪಾಯದ ಸೂಚನೆ ನೀಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಮೇಡೇ ಮೇಡೇ ಸಂದೇಶ ರವಾನಿಸಿದ್ದಾರೆ. ಕಂಟ್ರೋಲ್ ರೂಂ ಅಧಿಕಾರಿಗಳು ವಿಮಾನವನ್ನು ಬೆಂಗಳೂರಿಗೆ ಡೈವರ್ಟ್ ಮಾಡಲು ಸೂಚಿಸಿದ್ದಾರೆ. ಇದರಂತೆ ಬೆಂಗಳೂರಿನಲ್ಲಿ ವಿಮಾನ ತುರ್ತು ಭೂಸ್ವರ್ಶ ಮಾಡಿದೆ.
168 ಪ್ರಯಾಣಿಕರನ್ನು ಹೊತ್ತ ಇಂಡಿಗೋ 6E-6764 ವಿಮಾನ ಗೌವ್ಹಾಟಿಯಿಂದ ಟೇಕ್ ಆಫ್ ಆಗಿತ್ತು. ಏರ್ಬಸ್ A321 ವಿಮಾನ ಗೌವ್ಹಾಟಿ ವಿಮಾನ ನಿಲ್ದಾಣದಿಂದ ಸಂಜೆ 4.40ಕ್ಕೆ ಟೇಕ್ ಆಫ್ ಆಗಿತ್ತು. ಸಂಜೆ 7.45ಕ್ಕೆ ವಿಮಾನ ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹಾರಾಟದ ನಡುವೆ ವಿಮಾನದಲ್ಲಿ ಇಂಧನ ಖಾಲಿಯಾಗಿದೆ. ಇಂಧನ ಖಾಲಿ ಅಲರಾಂ ಸೂಚನೆ ಬರಲು ಆರಂಭಗೊಂಡಿದೆ. ಚೆನ್ನೈ ತಲುಪುವುದು ಅಸಾಧ್ಯವಾಗಿತ್ತು. ಇತ್ತ ಕಾಕ್ಪಿಟ್ನಲ್ಲಿನ ರೆಡ್ ಅಲರ್ಟ್ ಸೂಚನೆ ಬಂದಿದೆ. ಇಂಧನ ಖಾಲಿಯಾಗುತ್ತಿರುವ ಕಾರಣ ವಿಮಾನ ತುರ್ತು ಭೂಸ್ವರ್ಶ ಬಿಟ್ಟರೆ ಬೇರೆ ಮಾರ್ಗ ಇರಲಿಲ್ಲ.
ಏರ್ ಕಂಟ್ರೋಲ್ ರೂಂಗೆ ವಿಮಾನದ ಇಂಧನ ಮಾಹಿತಿಯನ್ನು ಪೈಲೆಟ್ ರವಾನಿಸಿದ್ದಾನೆ. ಕೆಲವೇ ನಿಮಿಷಗಳಷ್ಟು ಮಾತ್ರ ಇಂಧನ ಬಾಕಿ ಇತ್ತು. ಅದಾಗಲೇ ಅಲರಾಂ ಬಡಿದುಕೊಳ್ಳಲು ಆರಂಭಿಸಿದೆ. ಇತ್ತ ಪೈಲೆಟ್ ಕೂಡ ಆತಂಕಗೊಂಡಿದ್ದಾನೆ. ತಕ್ಷಣವೇ ಮೇಡೇ ಸಂದೇಶ ನೀಡಿದ್ದಾನೆ. ಮೇಡೇ ಸಂದೇಶ ಅತ್ಯಂತ ಅಪಾಯಾಕಾರಿ ಅಥವಾ ಯಾವುದೇ ಮಾರ್ಗ ಉಳಿಯದಿದ್ದಾಗ ವಿಮಾನದ ಪೈಲೆಟ್ ನೀಡುವ ಸಂದೇಶವಾಗಿದೆ.
ಚೆನ್ನೈಗೆ ತೆರಳಬೇಕಿದ್ದ ವಿಮಾನವನ್ನು ಪೈಲೆಟ್ ತಕ್ಷಣವೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನದತ್ತ ಡೈವರ್ಟ್ ಮಾಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಲಿದೆ ಅನ್ನೋ ಮಾಹಿತಿ ಸಿಗುತ್ತಿದ್ದಂತೆ ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿಗಳು, ಕಾರ್ಯಾಚರಣೆ ಪಡೆ ಸರ್ವ ಸನ್ನದ್ಧವಾಗಿತ್ತು. ಅಗ್ನಿಶಾಮಕ ದಳ, ಆ್ಯಂಬುಲೆನ್ಸ್, ರಕ್ಷಣಾ ಪಡೆ ಸಿಬ್ಬಂದಿಗಳು ಸಜ್ಜಾಗಿದ್ದರು. ಇಂದನ ಕೊರತೆಯಿಂದ ಮೇಡೇ ಸಂದೇಶ ನೀಡಿದ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಎಲ್ಲಾ ಪ್ರಯಾಣಿಕರು, ಸಿಬ್ಬಂದಿಗಳು ಸುರಕ್ಷಿತವಾಗಿ ಇಳಿದಿದ್ದಾರೆ.













