
(ನ್ಯೂಸ್ ಕಡಬ) newskadaba.com ಜೂ. 18. ಜಗತ್ತಿನಲ್ಲಿ ಮಾನವ ಹಾಗೂ ಪ್ರಾಣಿ ಸಂಘರ್ಷ ಇಂದು ನಿನ್ನೆಯದಲ್ಲ. ಆದರೆ, ಇತ್ತೀಚೆಗೆ ಮನುಷ್ಯ ತನ್ನ ಸ್ವಾರ್ಥಕ್ಕೋಸ್ಕರ ಅರಣ್ಯ ಸಂಪತ್ತಿಗೆ ಹೆಚ್ಚು ಹಾನಿ ಉಂಟು ಮಾಡುತ್ತಿದ್ದಂತೆ ಕಾಡು ಪ್ರಾಣಿಗಳು ಊರಿನ ಕಡೆ ಲಗ್ಗೆಯಿಡಲು ಪ್ರಾರಂಭಿಸಿದ್ದು, ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಕಾಡು ಪ್ರಾಣಿಗಳ ಉಪಟಳ ಜಾಸ್ತಿಯಾಗುತ್ತಿದೆ. ಇದರಿಂದ ಸಾರ್ವಜನಿಕರು ಹೈರಾಣಾಗಿ ಹೋಗಿದ್ದಾರೆ. ಅದೇ ರೀತಿ ಇದೀಗ ಕರಡಿಯೊಂದು ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿ ಭೀಕರ ಗಾಯಗೊಳಿಸಿದ ಘಟನೆ ಮಡಿಕೇರಿಯ ಪೊನ್ನಂಪೇಟೆ ತಾಲೂಕು, ಬಾಳಲೆ ಸಮೀಪದ ಜಾಗಲೆ ಎಂಬಲ್ಲಿ ನಡೆದಿದೆ.

ಗಾಯಗೊಂಡವರನ್ನು ಆಳಮೇಂಗಡ ಬಿದ್ದಪ್ಪ ಎಂಬವರ ತೋಟದ ಮನೆಯಲ್ಲಿ ವಾಸಿಸುತ್ತಿದ್ದ ಕಾಕು ಎಂಬವರ ಪುತ್ರ ಕುಳ್ಳ (42) ಎಂದು ಗುರುತಿಸಲಾಗಿದೆ. ಇವರು ರಾತ್ರಿ 11 ಗಂಟೆ ಸಮಯದಲ್ಲಿ ಮನೆಯ ಹೊರಗಡೆ ಮೂತ್ರ ವಿಸರ್ಜನೆಗೆಂದು ತೆರಳಿದ್ದ ಸಂದರ್ಭ ಕರಡಿಯೊಂದು ಏಕಾಏಕಿ ದಾಳಿ ನಡೆಸಿ ಮುಖದ ಭಾಗಕ್ಕೆ ಹೆಚ್ಚಿನ ಗಾಯಗೊಳಿಸಿದೆ. ಕೂಡಲೇ ಅವರನ್ನು ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.


