ಯಕ್ಷಗಾನದಲ್ಲಿ ರಾಹುಲ್‌ ಗಾಂಧಿ ಹೇಳಿದ್ದ ‘ಇವನರ್ವ’ ಶಬ್ದ ಬಳಕೆ ► ಯಕ್ಷಗಾನ ಕಲಾವಿದನನ್ನು ವಜಾಗೊಳಿಸುವಂತೆ ಚುನಾವಣಾ ಆಯೋಗದಿಂದ ನೋಟಿಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಎ.04. ಇತ್ತೀಚೆಗೆ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಬಸವಣ್ಣನ ವಚನವನ್ನು ಉಲ್ಲೇಖಿಸುತ್ತಾ ನೀಡಿದ್ದ ‘ಇವನರ್ವ’ ಹೇಳಿಕೆಯನ್ನು ಯಕ್ಷಗಾನದಲ್ಲಿ ಬಳಕೆ ಮಾಡಿದ ಆರೋಪದಲ್ಲಿ ಯಕ್ಷಗಾನ ಕಲಾವಿದರೊಬ್ಬರಿಗೆ ನೀತಿ ಸಂಹಿತೆ ಉಲ್ಲಂಘನೆಯ ಆರೋಪದಡಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಚುನಾವಣಾ ಅಧಿಕಾರಿ ನೋಟಿಸ್ ಜಾರಿಗೊಳಿಸಿದ ಘಟನೆ ಬುಧವಾರದಂದು ನಡೆದಿದೆ.

ಪೂರ್ಣೇಶ್ ಎಪ್ರಿಲ್ 1ರಂದು ಮೂಡುಬಿದಿರೆಯ ಪಡುಮಾರ್ನಾಡಿನ ಬನ್ನಡ್ಕ ಎಂಬಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಶಬ್ದ ಬಳಸಿದ್ದಾರೆ. ಆದ್ದರಿಂದ ಅವರನ್ನು ಮೇಳದಿಂದ ವಜಾಗೊಳಿಸವಂತೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ನೀಡಿರುವ ನೋಟಿಸ್‌ನಲ್ಲಿ ಕಟೀಲು ಮೇಳಕ್ಕೆ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಲಾವಿದ ಪೂರ್ಣೇಶ್, ‘ಇವನರ್ವ’ ಪದದ ಸಂಭಾಷಣೆಯನ್ನು ತಾನು ಬಳಸಿದ್ದು ಮಾರ್ಚ್ 24 ರಂದು ಕೇರಳದ ಮಾನ್ಯ ಎಂಬಲ್ಲಿ ನಡೆದ ಯಕ್ಷಗಾನದಲ್ಲಿ. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದಕ್ಕಿಂತ ಮುಂಚೆ ಘಟನೆ ನಡೆದಿದ್ದರಿಂದ ನೀತಿ ಸಂಹಿತೆ ಉಲ್ಲಂಘನೆಯ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ಆಯೋಗದ ನೋಟಿಸ್‌ಗೆ ಕಟೀಲು ಮೇಳ ಉತ್ತರ ನೀಡಲಿದೆ ಎಂದಿದ್ದಾರೆ.

error: Content is protected !!

Join the Group

Join WhatsApp Group