ಹೆತ್ತವರಿಲ್ಲದೇ ಪೋಷಕರ ಆಸರೆಯಲ್ಲಿ ಬೆಳೆದು ಅಗ್ನಿವೀರನಾಗಿ ಆಯ್ಕೆಗೊಂಡ ಕಡಬದ ಯುವಕ..!

(ನ್ಯೂಸ್ ಕಡಬ) newskadaba.com ಕಡಬ, ಜೂ. 13. ಸಣ್ಣ ಪ್ರಾಯದಲ್ಲೇ ಹೆತ್ತವರನ್ನು ಕಳೆದುಕೊಂಡರೂ ಸಾಕು ತಂದೆ-ತಾಯಿಯ ಆಸರೆಯಲ್ಲಿ ಬೆಳೆದು ಬಂದ ಯುವಕನೋರ್ವನಿಗೆ ತನ್ನ ಸಾಧನೆಯ ಮೂಲಕ ದೇಶಸೇವೆಗೆ ಆವಕಾಶ ಒದಗಿ ಬಂದಿದ್ದು, ಇಡೀ ಊರೇ ಹೆಮ್ಮೆ ಪಡುವಂತಾಗಿದೆ. 21ರ ಹರೆಯದ ಯುವಕ ಕಡಬದ ಐತ್ತೂರು ಗ್ರಾಮದ ಮಾಲ ನಿವಾಸಿ ಪುನೀತ್‌ರಾಜ್ ಇಂತಹ ಸಾಧನೆಯ ಶಿಖರವನ್ನೇರಿದ ಪ್ರತಿಭೆ.

2024ರ ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯಮಟ್ಟದಲ್ಲಿ ಆಯೋಜನೆ ಮಾಡಲಾಗಿದ್ದ ಅಗ್ನಿವೀರ ನೇಮಕಾತಿ ಶಿಬಿರದಲ್ಲಿ ಸುಮಾರು 25,೦೦೦ ಅಭ್ಯರ್ಥಿಗಳು ಭಾಗವಹಿಸಿ ಈ ಪೈಕಿ ಕೇವಲ 7೦೦ ಯುವಕರು ಮಾತ್ರ ಆಯ್ಕೆಯಾಗಿದ್ದರು. ಅದರಲ್ಲಿ ಪುನೀತ್‌ರಾಜ್ ಕೂಡ ಒಬ್ಬರು. ಅಗ್ನಿವೀರನಾಗಿ ಆಯ್ಕೆಗೊಂಡ ಇವರು ಮಹಾರಾಷ್ಟ್ರದ ನಾಸಿಕ್‌ ನಲ್ಲಿ 7 ತಿಂಗಳ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ್ದು, ಸದ್ಯ ಪಂಜಾಬ್‌ನ ಫರೀದ್ಕೋಟ್‌ ನಲ್ಲಿ ದೇಶಸೇವೆಗೆ ಹಾಜರಾಗಲು ಕರೆ ಬಂದಿದೆ.

ಪುನೀತ್ ಮೂಲತಃ ಸಕಲೇಶಪುರ ತಾಲೂಕಿನ ಹೊಂಗದಹಳ್ಳ ನಿವಾಸಿ ಅಪ್ಪಣ್ಣ ಹಾಗೂ ಗಿರಿಜಾ ದಂಪತಿ ಪುತ್ರ. 2004ರಲ್ಲಿ ಗಿರಿಜಾ ಅವರು 7 ತಿಂಗಳ ಗರ್ಭವಾಸ್ಥೆಯಲ್ಲಿರುವಾಗಲೇ ಪತಿ ಆಕಸ್ಮಿಕ ಘಟನೆಯೊಂದರಲ್ಲಿ ಮೃತಪಟ್ಟಿದ್ದು, ಗಂಡನನ್ನು ಕಳೆದುಕೊಂಡ ಗಿರಿಜಾ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಆಸರೆಯಾಗಿದ್ದು ಐತ್ತೂರು ಗ್ರಾಮದ ಮಾಲ ಕುಟುಂಬದಲ್ಲಿದ್ದ ಅಕ್ಕ ಸೇಸಮ್ಮ ಮತ್ತು ಅವರ ಗಂಡ ಶೀನಪ್ಪ ಗೌಡ.

Also Read  ಉಪ್ಪಿನಂಗಡಿ: ವಿದ್ಯುತ್ ಶಾಕ್ ಹೊಡೆದು ಲೈನ್ ಮ್ಯಾನ್ ಮೃತ್ಯು

ಕಡಬದ ಐತ್ತೂರಿನ ಮಾಲ ಕುಟುಂಬದಲ್ಲಿ ಆಸರೆ ಪಡೆದ ಗಿರಿಜಾ ಅವರಿಗೆ ಮಗನಾಗಿ ಪುನೀತ್‌ರಾಜ್ ಹುಟ್ಟಿದರು. ಮಾಲ ಮನೆಯಲ್ಲೇ ತನ್ನ ಬಾಲ್ಯ ಕಳೆಯುತ್ತಾ 5ನೇ ತರಗತಿ ವರೆಗೆ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಬಳಿಕ ಪುತ್ತೂರಿನ ಸರಕಾರಿ ಹಾಸ್ಟೆಲ್‌ ನಲ್ಲಿ ಉಳಿದುಕೊಂಡು 6ನೇ ತರಗತಿಯಿಂದ ಪದವಿ ತನಕ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಪ್ರಸ್ತುತ ಅಂತಿಮ ಪದವಿ ಕಲಿಯುತ್ತಿದ್ದು, ಈ ನಡುವೆ 2021ನೇ ಇಸವಿಯಲ್ಲಿ ಪುನೀತ್‌ರಾಜ್ ಅವರ ತಾಯಿಯೂ ಅನಾರೋಗ್ಯದಿಂದ ನಿಧನರಾದರು. ಹೆತ್ತ ತಾಯಿಯನ್ನೂ ಕಳೆದುಕೊಂಡ ಯುವಕ ತಬ್ಬಲಿಯಾದರೂ ಧೃತಿಗೆಡದೆ ವಿದ್ಯಾಭ್ಯಾಸ ಮುಂದುವರಿಸಿದರು. ರಜೆಯ ಸಮಯದಲ್ಲಿ ಊರಿಗೆ ಬಂದು ಸಣ್ಣಪುಟ್ಟ ಕೆಲಸಗಳಿಗೆ ಹೋಗುತ್ತಾ ತನ್ನ ಖರ್ಚು ವೆಚ್ಚವನ್ನೂ ನಿಭಾಯಿಸಲು ಪ್ರಯತ್ನಿಸುತ್ತಿದ್ದರು.

ಮಿಲಿಟರಿಗೆ ಸೇರಬೇಕೆಂಬ ಕನಸು ನನಸಾಯಿತು: ಬಾಲ್ಯದ ದಿನದಿಂದಲೇ ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಪ್ರದರ್ಶಿಸುತ್ತಿದ್ದ ಪುನೀತ್‌ರಾಜ್‌ಗೆ ಅವನ ಸಾಕು ತಂದೆಯ ತಮ್ಮ ದೇವಯ್ಯ ಗೌಡ ಅವರು, ನೀನು ದೊಡ್ಡವನಾದ ಮೇಲೆ ಮಿಲಿಟರಿ ಸೇವೆಗೆ ಸೇರಬೇಕು ಎಂದು ಕಿವಿ ಮಾತು ಹೇಳುತ್ತಾ ಬಂದಿದ್ದರು. ಇದಕ್ಕೆ ಪೂರಕವಾಗಿ ಪುನೀತ್‌ರಾಜ್ ಚಿಕ್ಕ ಪ್ರಾಯದಿಂದಲೇ ಆಟೋಟ ಸ್ಪರ್ಧೆಗಳು, ಯೋಗ, ವ್ಯಾಯಾಮ ಮುಂತಾದ ವಿವಿಧ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾ ಬಂದಿದ್ದರು. ದೇವಯ್ಯ ಗೌಡರು ಪುನೀತ್‌ರಾಜ್‌ಗೆ ಸಲಹೆ ಸೂಚನೆ ನೀಡುತ್ತಾ ಅವನ ಬೆಳವಣಿಗೆಗೆ ಎಲ್ಲಾ ರೀತಿಯ ಪ್ರೋತ್ಸಾಹ, ಸಹಕಾರ ನೀಡಿದ್ದರು. ಇವೆಲ್ಲದರ ಫಲವಾಗಿಯೇ ಪುನೀತ್‌ರಾಜ್ ಈಗ ದೇಶಸೇವೆಗೆ ಸಿದ್ಧರಾಗಿ ನಿಂತಿದ್ದಾರೆ.

Also Read  BIG SHOCKING: ರಾಜ್ಯದಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಯೋಗಾಸನ, ಖೋಖೋ, ಅಥ್ಲೆಟಿಕ್ಸ್ ಮತ್ತು ಎನ್‌ಸಿಸಿ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡು ವಿಶ್ವವಿದ್ಯಾನಿಲಯ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದು ಅಗ್ನಿವೀರ ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ಹೊರ ಹೊಮ್ಮಲು ಪೂರಕವಾಗಿದೆ ಎನ್ನುತ್ತಾರೆ ಪುನೀತ್‌ರಾಜ್.

ಮನೆಯಲ್ಲೇ ಸನ್ಮಾನಿಸಿ ಗೌರವ: ಭಾರತೀಯ ಸೇನೆಗೆ ಅಗ್ನಿವೀರ ಆಗಿ ಆಯ್ಕೆಗೊಂಡ ಪುನೀತ್‌ರಾಜ್‌ರವರಿಗೆ ಅವರ ಸಾಕು ತಂದೆ-ತಾಯಿಗಳಾದ ಐತ್ತೂರು ಗ್ರಾಮದ ಮಾಲ ನಿವಾಸಿ ಶೀನಪ್ಪ ಗೌಡ ಮತ್ತು ಸೇಸಮ್ಮ ಅವರು ತಮ್ಮ ಮಾಲ ಮನೆಯಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ.

ಬಾಲ್ಯದಲ್ಲೇ ತಂದೆ, ತಾಯಿ ಪ್ರೀತಿಯಿಂದ ವಂಚಿತನಾಗಿ ಸಾಕು ತಂದೆ, ತಾಯಿಯ ಹಾಗೂ ತನ್ನನ್ನು ಬೆಳೆಸಿದವರ ಪ್ರೀತಿಗೆ ವಂಚನೆ ಮಾಡದೇ ಬೆಳೆದ ಪುನೀತ್‌ರಾಜ್ ಕುಮಾರ್ ಕೋಟ್ಯಾಂತರ ಭಾರತೀಯರು ತಾಯಿಯಂತೆ ಪೂಜಿಸುವ ಭಾರತ ಮಾತೆಯ ಸೇವೆಗೆ ಸಿದ್ಧನಾಗಿ ನಿಂತಿರುವುದು ನಮ್ಮ ಕಡಬಕ್ಕೆ ಹೆಮ್ಮೆಯ ವಿಚಾರವಾಗಿದೆ.

error: Content is protected !!
Scroll to Top