18 ವರ್ಷಗಳ ಬಳಿಕ ಐಪಿಎಲ್ ಕಪ್ ಗೆದ್ದ ರಾಯಲ್ ಚಾಂಪಿಯನ್ಸ್‌ಗೆ ತಂಡಕ್ಕೆ ಬೆಂಗಳೂರಲ್ಲಿ ಅದ್ದೂರಿ ಸ್ವಾಗತ

(ನ್ಯೂಸ್ ಕಡಬ) newskadaba.com ಜೂ:04, ಟಾಟಾ ಐಪಿಎಲ್-2025 ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಉದ್ಯಾನನಗರಿಗೆ ಆಗಮಿಸಿದ್ದು, ಅಭಿಮಾನಿಗಳ ಸಾಗರವೇ ಅದ್ಧೂರಿ ಸ್ವಾಗತ ನೀಡಿದೆ. ಇಂದು ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದ ವಿರಾಟ್ ಕೊಹ್ಲಿ ಬಳಗವನ್ನು ಸಾಂಪ್ರದಾಯಿಕ ಮೈಸೂರು ಪೇಟ, ಮಲ್ಲಿಗೆ ಹಾರ ಹಾಕಿ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು.

ನಂತರ ಅಲ್ಲಿಂದ ತೆರಳುವ ಮಾರ್ಗದಲ್ಲಿ ನೆರೆದಿದ್ದ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಆರ್‌ಸಿಬಿ…. ಆರ್‌ಸಿಬಿ… ಎಂದು ಕೂಗಿದರು. ರಾತ್ರಿಯಿಡೀ ಕ್ರಿಕೆಟ್ ಪ್ರಿಯರು ತಮ್ಮ ನೆಚ್ಚಿನ ಆಟಗಾರರಿಗೆ ಜಯಘೋಷಗಳನ್ನು ಕೂಗಿ ಕಪ್ ನಮ್ಮದೇ ಎಂದು ಘೋಷಣೆ ಕೂಗಿ ಸಿಹಿ ಹಂಚಿ ದೊಡ್ಡಮಟ್ಟದಲ್ಲಿ ಖುಷಿಪಟ್ಟಿದ್ದಾರೆ.

ಇನ್ನು ಪ್ರತ್ಯಕ್ಷವಾಗಿ ಆರ್‌ಸಿಬಿ ಆಟಗಾರರ ತಂಡವನ್ನು ಕಂಡು ಪುಳಕಿತರಾದ ಜನಸಮೂಹ ಪುಷ್ಪ ಎರಚಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ಸತತ 18 ವರ್ಷಗಳ ಕಾಲ ನಮ್ಮ ಜತೆ ಇದ್ದು, ಸದಾಕ್ಷಣ ನಮ್ಮನ್ನು ಬೆಂಬಲಿಸಿದ ಬೆಂಗಳೂರಿಗೆ ನನ್ನ ತನುಮನ ಎಲ್ಲವೂ ಸಮರ್ಪಿತ ಎಂದು ಕಿಂಗ್ ವಿರಾಟ್ ಕೊಹ್ಲಿ ಅವರ ಭಾವನಾತ್ಮಕ ಮಾತುಗಳು ಕ್ರಿಕೆಟ್ ಪ್ರಿಯರ ಮನತಟ್ಟಿದೆ. ವಿಮಾನ ನಿಲ್ದಾಣದಲ್ಲೇ ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟನಂತರ ಅವರು ನೇರವಾಗಿ ವೆಸ್ಟ್‌ ಎಂಡ್ ಹೊಟೇಲ್‌ಗೆ ಆಗಮಿಸಿ ಅಲ್ಪಕಾಲ ವಿಶ್ರಾಂತಿ ಪಡೆದ ನಂತರ ಸಂವಿಧಾನದ ದೇಗುಲ ವಿಧಾನಸೌಧಕ್ಕೆ ಆಗಮಿಸಿ ರಾಜ್ಯ ಸರ್ಕಾರದಿಂದ ಗೌರವ ಸ್ವೀಕರಿಸಿದ ಆಟಗಾರರು ಭಾವಪರವಶರಾದರು.

error: Content is protected !!
Scroll to Top