ಎ.3 ರಿಂದ 9ರ ವರೆಗೆ ಸವಣೂರು ಯುವಕ ಮಂಡಲದ ರಾಷ್ಟ್ರೀಯ ಯುವ ಸಪ್ತಾಹ

(ನ್ಯೂಸ್ ಕಡಬ) newskadaba.com ಸವಣೂರು,ಎ.3. ಕಳೆದ 18 ವರ್ಷಗಳಿಂದ ನಡೆಯುತ್ತಿರುವ ಸವಣೂರು ಯುವಕ ಮಂಡಲದ ವತಿಯಿಂದ 7 ದಿನಗಳ ರಾಷ್ಟ್ರೀಯ ಯುವ ಸಪ್ತಾಹ ಎ.3 ರಿಂದ 9ರ ತನಕ ವಿವಿಧ ಕಡೆಗಳಲ್ಲಿ ಜರುಗಲಿದೆ. ಕೊನೆಯ ದಿನ ಸಮಾರೋಪ ಸಮಾರಂಭದಂದು ಯುವ ಮಂಡಲಿ ಪ್ರಶಸ್ತಿ, ಯುವ ಪ್ರಶಸ್ತಿ ಮತ್ತು ನಾಲ್ಕು ಮಂದಿ ಸಾಧಕರಿಗೆ ಅಭಿನಂದನೆ ಹಾಗೂ 6ಮಂದಿಯನ್ನು ಗರುತಿಸುವಿಕೆಯ ಕಾರ್ಯಕ್ರಮ ನಡೆಯಲಿದೆ ಎಂದು ಸವಣೂರು ಯುವಕ ಮಂಡಲದ ಅಧ್ಯಕ್ಷ ಯತೀಶ್ ಕುಮಾರ್ ಕೆ.ಎಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಎ.3ರಂದು ರಾಷ್ಟ್ರೀಯ ಯುವ ಸಪ್ತಾಹದ ಉದ್ಘಾಟನಾ ಸಮಾರಂಭವು ಕುಟುಂಬ ಸಮ್ಮಿಲನದ ಮೂಲಕ ಮೆದು ಪದ್ಮಶ್ರೀ ನಿಲಯದಲ್ಲಿ ಉದ್ಘಾಟನೆಗೊಳ್ಳಲಿದೆ. ವಿದ್ಯಾರಶ್ಮಿ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಸವಣೂರು ಗ್ರಾ.ಪಂ ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ ಸದಸ್ಯೆ ಪ್ರಮೀಳಾ ಜನಾರ್ದನ ಆಚಾರ್ಯ, ತಾ.ಪಂ ಉಪಾಧ್ಯಕ್ಷೆ ರಾಜೇಶ್ವರಿ, ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಉದಯ ರೈ ಮಾದೋಡಿ, ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸವಣೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಆಶಯ ಮಾತನ್ನಾಡಲಿದ್ದಾರೆ.
ಎ.4ರಂದು ಸವಣೂರು ಯುವಕ ಮಂಡಲದ ಆಶ್ರಯದಲ್ಲಿ ಸುಳ್ಯ ಕಾಯರ್ತೋಡಿ ಬೆಳ್ಳಿಹಬ್ಬ ವರ್ಷಾಚರಣಾ ಸಮಿತಿ ಮಿತ್ರಬಳಗದ ಸಹಯೋಗದೊಂದಿಗೆ ಸ್ನೇಹ ಮಿಲನ ಮತ್ತು ಸ್ವಚ್ಛತಾ ಕಾರ್ಯ ಸವಣೂರು ಯುವ ಸಭಾಭವನದ ವಠಾರದಲ್ಲಿ ಜರುಗಲಿದೆ. ಸವಣೂರು ಕುಮಾರ ಕ್ಲಿನಿಕ್‌ನ ಡಾ. ಶ್ಯಾಮ್ ಸುಂದರ್‌ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಮೋಹನ್ ದೇವಾಡಿಗ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎ.5ರಂದು ಕಾರು ಮತ್ತು ದ್ವಿಚಕ್ರ ವಾಹನಗಳ ಬುಕ್ಕಿಂಗ್, ಸಾಲಸೌಲಭ್ಯ ಹಾಗೂ ಮೊಬೈಲ್ ಸಿಮ್ ಮಾಹಿತಿ ಮೇಳವು ಸವಣೂರು ಯುವ ಸಭಾಭವನದಲ್ಲಿ ಜರುಗಲಿದೆ. ನಿವೃತ್ತ ವಿಜಯ ಬ್ಯಾಂಕ್ ಅಧಿಕಾರಿ ಪಿ.ಡಿ.ಕೃಷ್ಣಕುಮಾರ್ ರೈ ಉದ್ಘಾಟಿಸಲಿದ್ದಾರೆ. ಪ್ರಗತಿಪರ ಕೃಷಿಕ ಶಿವರಾಮ ಗೌಡ ಮೆದು ಅಧ್ಯಕ್ಷತೆ ವಹಿಲಿಸದ್ದಾರೆ. ಎ.6ರಂದು ಸವಣೂರು ರೈಲ್ವೇಗೇಟ್ ಬಳಿಯ ಸಂತಸ ನಿವಾಸದಲ್ಲಿ ಭಜನಾ ಕಾರ್ಯಕ್ರಮ ಜರುಗಲಿದೆ. ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಮುಖ್ಯಗುರು ಗಿರಿಶಂಕರ ಸುಲಾಯ ಚಾಲನೆ ನೀಡಲಿದ್ದಾರೆ. ಎ.7 ಮತ್ತು 8ರಂದು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ಜರುಗಲಿದೆ. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕರುಣಾಕರ ಪೂಜಾರಿ ಪಟ್ಟೆ ಪಂದ್ಯಾಟ ಉದ್ಘಾಟಿಸಲಿದ್ದಾರೆ. ಪ್ರಗತಿಪರ ಕೃಷಿಕ ಪಿ.ಡಿ.ಗಂಗಾಧರ ರೈ ದೇವಸ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಎ.8ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸವಣೂರು ಗ್ರಾ.ಪಂ ಉಪಾಧ್ಯಕ್ಷ ರವಿಕುಮಾರ್ ಬಿ.ಕೆ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದ ಅವರು ಅದೇ ದಿನ ಬೆಳಿಗ್ಗೆ ಭಾರತ ಸೇವಾಶ್ರಮ ಕನ್ಯಾನದಲ್ಲಿ ಹಿರಿಯರೊಂದಿಗೆ ಒಂದು ದಿನ ಕಾರ್ಯಕ್ರಮ ಜರುಗಲಿದೆ.
ಭಾರತ ಸೇವಾಶ್ರಮದ ಕಾರ್ಯದರ್ಶಿ ಯಸ್.ಈಶ್ವರ ಭಟ್ ಸೇರಿದಂತೆ ಅನೇಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಕುದ್ಮಾರು ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆಯಲ್ಲಿ ಸವಣೂರು ಯುವಕ ಮಂಡಲ ಮತ್ತು ಸ್ಕಂದಶ್ರೀ ಯುವಕ ಮಂಡಲದ ಸಹಕಾರದೊಂದಿಗೆ ಬೀದಿ ನಾಟಕ ಸಂಯಮ ಪ್ರದರ್ಶನಗೊಳ್ಳಲಿದೆ. ವಕೀಲರ ಸಂಘದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸವಣೂರು ಜನಜಾಗೃತಿ ವೇದಿಕೆಯ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿಯವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು. ಎ.9ರಂದು ಸವಣೂರು ಯುವ ಸಭಾಭವನದ ವಠಾರದಲ್ಲಿ ರಾಷ್ಟ್ರೀಯ ಯುವ ಸಪ್ತಾಹದ ಸಮಾರೋಪ ಸಮಾರಂಭ ಜರುಗಲಿದ್ದು, ತಾಲೂಕು ಮಟ್ಟದ ಉತ್ತಮ ಯುವ ಮಂಡಲಿ ಪ್ರಶಸ್ತಿ ಮತ್ತು ಯುವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಅನೇಕ ಅತಿಥಿಗಳು ಭಾಗವಹಿಸಲಿದ್ದಾರೆ ಎಂದರು.
ಯುವ ಮಂಡಲಿ – ಯುವ ಪ್ರಶಸ್ತಿ – 4 ಮಂದಿ ಸಾಧಕರಿಗೆ ಅಭಿನಂದನೆ – 6 ಮಂದಿಯ ಗುರುತಿಸುವಿಕೆ
 ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ನ್ಯಾಯವಾದಿ ಮಹೇಶ್ ಕೆ.ಸವಣೂರುವರು ಮಾತನಾಡಿ ತಾಲೂಕು ಮಟ್ಟದ ಶ್ರವಣಕೀರ್ತಿ ಪ್ರಶಸ್ತಿಯನ್ನು ವಿವೇಕಾನಂದ ಯುವಕ ವೃಂದ ಕೌಡಿಚ್ಚಾರು ಮತ್ತು ಶ್ರವಣ ದೀಪ ಪ್ರಶಸ್ತಿಯನ್ನು ಕಮಲೇಶ್, ಷಣ್ಮುಖ ಯುವಕ ಮಂಡಲ ಸರ್ವೆ ಇವರಿಗೆ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಅನೇಕ ಸಾಧಕರನ್ನು ಅಭಿನಂದಿಸಲಾಗುವುದು. ಕ್ರೀಡೆಯಲ್ಲಿ ವಸಂತಿ ಶಿವರಾಮ ಗೌಡರಿಗೆ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ ಮತ್ತು ವಿವೇಕ್ ಆಳ್ವ ನಡುಮನೆ, ಸೇವಾ ಕ್ಷೇತ್ರಕ್ಕೆ ಸಂಬಂಧಿಸಿ ವೇದಾವತಿ ಬಾಲಕೃಷ್ಣ ಗೌಡ ಅಂಜಯರವರನ್ನು ಅಭಿನಂದಿಸಲಾಗುವುದು. ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಜಿಲ್ಲಾ ಯು ಪ್ರಶಸ್ತಿ ಪುರಸ್ಕೃತ ಸಚಿನ್ ಎಸ್, ಏಕಪಾತ್ರಾಭಿನಯ ರಾಜ್ಯಮಟ್ಟದ ವಿಜೇತ ರಾಕೇಶ್ ರೈ ಕೆಡೆಂಜಿ, ಯಕ್ಷಗಾನದಲ್ಲಿ ರಾಜ್ಯಮಟ್ಟದಲ್ಲಿ ಪುರಸ್ಕೃತಗೊಂಡ ತಾರಾನಾಥ ಸವಣೂರು, ಪ್ರವೀಣ್ ಬಲ್ಯಾಯ, ಪ್ರಸಾದ್ ಅರೇಲ್ತಡಿಯವರನ್ನು ಗುರುತಿಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರುಗಳಾದ ದಯಾನಂದ ಮೆದು, ಸಚಿನ್ ಎಸ್, ಮಾಜಿ ಕಾರ್ಯದರ್ಶಿ ಸತೀಶ್ ಬಲ್ಯಾಯ ಉಪಸ್ಥಿತರಿದ್ದರು.
error: Content is protected !!

Join the Group

Join WhatsApp Group