(ನ್ಯೂಸ್ ಕಡಬ) newskadaba.com ಕಡಬ, ಮೇ. 31. ಮಡಿಕೇರಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಕಿರು ಸಾಲದವರ ಕಿರುಕುಳ ತಾಳಲಾಗದೆ ಗುಂಡು ಹಾರಿಸಿಕೊಂಡು ಮಾಜಿ ಯೋಧರೊಬ್ಬರು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಮಡಿಕೇರಿಯ ಮಹಿಳಾ ಸಮಾಜದ ಗೋದಾಮಿನಲ್ಲಿ ಮಾಜಿ ಯೋಧ ದೇವಜನ ಜಗದೀಶ್ (56) ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಗದೀಶ್ ಅವರು ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಆರ್ಥಿಕ ಸಮಸ್ಯೆ, ಮೈಕ್ರೋ ಫೈನಾನ್ಸ್ನಿಂದ ಕಿರಿಕಿರಿ ಎಂದು ಉಲ್ಲೇಖಿಸಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮೈಕ್ರೋಫೈನಾನ್ಸ್ ಕಿರುಕುಳ ಇತ್ತೀಚೆಗೆ ರಾಜ್ಯದಲ್ಲಿ ಅಧಿಕವಾಗಿದ್ದು, ಹಲವಾರು ಸಾವುಗಳ ವರದಿಯಾಗಿದ್ದವು. ಇದನ್ನು ಗಮನಿಸಿದ್ದ ರಾಜ್ಯ ಸರಕಾರ ಮೈಕ್ರೋಫೈನಾನ್ಸ್ ವಿಧೇಯಕವನ್ನು ಮಂಡಿಸಿ ಅಂಗೀಕರಿಸಿತ್ತು. ಅದಕ್ಕೆ ರಾಜ್ಯಪಾಲರು ಕಳೆದ ಫೆಬ್ರವರಿಯಲ್ಲಿ ಅಂಕಿತ ಹಾಕಿದ್ದರು. ಈ ಸುಗ್ರೀವಾಜ್ಞೆಯು, ಕಿರುಕುಳ ನೀಡಿದವರಿಗೆ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂ.ಗಳವರೆಗೆ ವಿಸ್ತರಿಸಬಹುದಾದ ದಂಡವನ್ನು ವಿಧಿಸಲು ಅವಕಾಶ ಹೊಂದಿದೆ. ಈ ಸುಗ್ರೀವಾಜ್ಞೆಯ ಅಡಿಯಲ್ಲಿರುವ ಅಪರಾಧಗಳು ಜಾಮೀನು ರಹಿತವಾಗಿವೆ.
ಈ ವಿಧೇಯಕದ ಪ್ರಕಾರ, ಸಾಲಗಾರರು ಅಥವಾ ಅವರ ಕುಟುಂಬ ಸದಸ್ಯರ ಮೇಲೆ ಬಲವಂತದ ಕ್ರಮಗಳನ್ನು ಹೇರುವುದು, ಅಡ್ಡಿಪಡಿಸುವುದು, ಹಿಂಸೆ ನೀಡುವುದು, ಅವಮಾನಿಸುವುದು, ಬೆದರಿಸುವುದು ಅಥವಾ ಸಾಲಗಾರರು, ಅವರ ಕುಟುಂಬ ಸದಸ್ಯರನ್ನು ನಿರಂತರವಾಗಿ ಹಿಂಬಾಲಿಸುವುದು ಅಥವಾ ಅವರ ಒಡೆತನದ ಅಥವಾ ಬಳಸಿದ ಯಾವುದೇ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯುವುದು ಶಿಕ್ಷಾರ್ಹ ಅಪರಾಧಗಳಾಗಿವೆ. ಸಾಲಗಾರರು ವಾಸಿಸುವ ಮನೆ ಅಥವಾ ಇತರ ಸ್ಥಳಗಳಿಗೆ ಆಗಾಗ್ಗೆ ಹೋಗುವುದು, ಹಣವನ್ನು ವಸೂಲಿ ಮಾಡಲು ಹೊರಗುತ್ತಿಗೆ ನೀಡುವುದು ಮತ್ತು ಸಾಲಗಾರರಿಂದ ಯಾವುದೇ ದಾಖಲೆಯನ್ನು ಬಲವಂತವಾಗಿ ತೆಗೆದುಕೊಳ್ಳುವುದು ಸಹ ದಂಡದ ಕ್ರಮಕ್ಕೆ ಆಹ್ವಾನ ನೀಡುತ್ತದೆ.