ಸವಣೂರು: ಮತದಾನದ ಮಹತ್ವ ಮತ್ತು ಜಾಗೃತಿ ಕಾರ್ಯಕ್ರಮ ► ವಿಧಾನಸಭಾ ಚುನಾವಣೆಗೆ ಪೊಲೀಸ್ ಇಲಾಖೆ ಸರ್ವ ಸನ್ನದ್ಧ: ಎಸ್ಪಿ ಡಾ. ರವಿಕಾಂತೇ ಗೌಡ

(ನ್ಯೂಸ್ ಕಡಬ) newskadaba.com ಸವಣೂರು, ಮಾ.23. ಪೊಲೀಸ್ ಠಾಣೆಯೆಂದರೆ ಅದು ಅಧಿಕಾರ ಚಲಾಯಿಸೋ ಕೇಂದ್ರವಲ್ಲ. ಬದಲಾಗಿ ಸಾರ್ವಜನಿಕರ ಸೇವೆ ಮಾಡೋ ಕೇಂದ್ರಗಳು. ವಿಧಾನ ಸಭಾ ಚುನಾವಣೆ ಸುಸೂತ್ರವಾಗಿ ನಡೆಯಲು ಚುನಾವಣಾ ಆಯೋಗದ ಸೂಚನೆಯಂತೆ ಪೊಲೀಸ್ ಇಲಾಖೆ ಸನ್ನಧವಾಗಿದೆ. ಚುನಾವಣೆ ಹಿನನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆ 22 ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕಾಂತೇ ಗೌಡ ಹೇಳಿದರು.


ಅವರು ಶನಿವಾರ ಸವಣೂರಿನ ವಿನಾಯಕ ಸಭಾಭವನದಲ್ಲಿ ದ.ಕ.ಜಿಲ್ಲಾ ಪೊಲೀಸ್, ಬೆಳ್ಳಾರೆ ಪೊಲೀಸ್ ಠಾಣೆ, ದ.ಕ.ಜಿಲ್ಲಾ ಪೊಲೀಸ್ ಸ್ವೀಪ್ ಸಮಿತಿ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇದರ ವತಿಯಿಂದ ಮತದಾನದ ಮಹತ್ವ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರುದ್ದೇಶಿಸಿ ಮಾತನಾಡಿದರು. ಚುನಾವಣೆಗೆ ಇನ್ನೂ ದಿನಗಳು ತುಂಬಾನೇ ಇದೆ ಆದರೆ ಈಗಲೇ ಕೋವಿಯನ್ನು ಠಾಣೆಯಲ್ಲಿ ಇಡಲು ಸೂಚಿಸಿದ್ದಾರೆ. ಆ ಸಮಯದಲ್ಲಿ ರಕ್ಷಣೆಗೆ ಏನು ಮಾಡಬೇಕು. ತೋಟದ ಮಧ್ಯೆ ಒಂಟಿ ಮನೆಯಿದ್ದವರು ರಕ್ಷಣೆಗೆ ಏನು ಮಾಡಬೇಕು. ಬಂದೂಕು ಪರವಾನಿಗೆ ನೀಡುವುದು ಕ್ರಿಮಿನಲ್ ಹಿನ್ನೆಲೆಯಿಲ್ಲದವರಿಗೆ. ಆದರೆ ಚುನಾವಣೆಯ ಸಮಯದಲ್ಲಿ ಕ್ರಿಮಿನಲ್‍ಗಳಿಗಿಂತಲೂ ಹೆಚ್ಚು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಶ್ರೀಧರ್ ರೈ ಮಾದೋಡಿ, ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಶ್ರೀಧರ್ ಗೌಡ ಅಂಗಡಿಹಿತ್ಲು ಹೇಳಿದರು. ಇದಕ್ಕುತ್ತರಿಸಿದ ಎಸ್ಪಿ, ಚುನಾವಣಾ ಆಯೋಗದ ಸೂಚನೆಯಂತೆ ಈ ನಿರ್ಧಾರ ಪ್ರಕಟಿಸಲಾಗಿದೆ. ಆದಾಗ್ಯೂ ದೈನಂದಿನ ಜೀವನ ನಡೆಸಲು, ಒಂಟಿ ಮನೆ ಇದ್ದಲ್ಲಿ ಆ ಮನೆಯವರು ಅರ್ಜಿ ಸಲ್ಲಿಸಬಹುದು. ಜಿಲ್ಲಾಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಚುನಾವಣೆ ನೀತಿ ಸಂಹಿತೆಯಿಂದ ಖಾಸಗಿ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಬೇಕು ಎಂದು ಎಪಿಎಂಸಿ ನಿರ್ದೇಶಕ ದಿನೇಶ್ ಮೆದು ಹೇಳಿದರು. ಉತ್ತರಿಸಿದ ಎಸ್ಪಿ ಅವರು ಚುನಾವಣೆ ಹಿನ್ನೆಲೆಯಲ್ಲಿ ಕೇವಲ 40 ದಿನ ತೊಂದರೆಯಾಗುತ್ತದೆ. ಚುನಾವಣೆ ಎನ್ನುವುದು ಮುಂದಿನ 5 ವರ್ಷಗಳಿಗೆ ನಮ್ಮನ್ನು ಆಡಳಿತ ನಡೆಸಲು ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಾದುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದರು. ಈ ಕುರಿತು ಉಪವಿಭಾಗಾಧಿಕಾರಿಯವರ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಲಲಾಗುವುದು ಎಂದರು.

ಸಭೆಯಲ್ಲಿ ಅಶ್ರಫ್ ಜನತಾ,ಶಿವಪ್ಪ ಅಟ್ಟೋಳೆ,ಸುರೇಶ್ ರೈ ಸೂಡಿಮುಳ್ಳು,ಪಿ.ಡಿ.ಗಂಗಾಧರ ರೈ, ನಾಗರಾಜ ನಿಡ್ವಣ್ಣಾಯ ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ, ಯಶೋಧರ ಕೆಡೆಂಜಿಕಟ್ಟ, ವಿವಿಧ ಪ್ರಶ್ನೆಗಳನ್ನು ಕೇಳಿದರು. ಜನಪ್ರತಿನಿಧಿಗಳು ಸಹಿತ ವಿವಿಧ ಪಕ್ಷದ ಮುಖಂಡರು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಸಭೆಯಲ್ಲಿ ಡಿವೈಎಸ್ಪಿ ಶ್ರೀನಿವಾಸ್, ವೃತನಿರೀಕ್ಷಕ ಆರ್. ಸತೀಶ್ ಕುಮಾರ್, ಬೆಳ್ಳಾರೆ ಠಾಣಾ ಎಎಸೈ ಭಾಸ್ಕರ ಅಡ್ಕಾರು,ಬೀಟ್ ಪೊಲೀಸ್ ಕೃಷ್ಣಪ್ಪ, ಸತೀಶ್ ಎಸ್., ಬಾಲಕೃಷ್ಣ ಕೊಪ್ಪ ಉಪಸ್ಥಿತರಿದ್ದರು. ಬೆಳ್ಳಾರೆ ಠಾಣಾ ಉಪ ನಿರೀಕ್ಷಕ ಡಿ.ಯನ್. ಈರಯ್ಯ ಸ್ವಾಗತಿಸಿ, ಸಿಬಂದಿ ಶ್ರೀಶೈಲ ವಂದಿಸಿದರು.

error: Content is protected !!

Join the Group

Join WhatsApp Group