(ನ್ಯೂಸ್ ಕಡಬ) newskadaba.com ಮಾ. 10 ನವದೆಹಲಿ: ಮತದಾರರ ಪಟ್ಟಿಗಳಲ್ಲಿ ಅಕ್ರಮ ನಡೆದಿರುವ ಆರೋಪ, ವಕ್ಫ್ ಮಸೂದೆ, ಕ್ಷೇತ್ರ ವಿಂಗಡಣೆ ಮತ್ತು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತದ ಸುಂಕದ ಹಕ್ಕುಗಳ ವಿಷಯಗಳ ಕುರಿತು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿರುವುದರ ಮಧ್ಯೆ ಇಂದು ಸೋಮವಾರದಿಂದ ಸಂಸತ್ತು ಬಜೆಟ್ ಅಧಿವೇಶನ ಎರಡನೇ ಹಂತ ಆರಂಭವಾಗುತ್ತಿದೆ.

ಕ್ಷೇತ್ರ ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ನಡುವಿನ ತಿಕ್ಕಾಟ ಸಂಸತ್ತಿನಲ್ಲಿ ಪ್ರತಿಧ್ವನಿಸುವ ಸೂಚನೆ ಸಿಕ್ಕಿದೆ. ತಮಿಳು ನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (DMK) ಸಂಸದರು ಅಧಿವೇಶನದಲ್ಲಿ ಕ್ಷೇತ್ರ ವಿಂಗಡಣೆ ಮತ್ತು ‘ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆ’ಯ ಸಮಸ್ಯೆಗಳನ್ನು ಆರೋಪಿಸಿ ನಿರ್ಣಯವನ್ನು ಅಂಗೀಕರಿಸಿದರು.
ಲೋಕಸಭಾ ಸ್ಥಾನಗಳ ಜನಸಂಖ್ಯೆ ಆಧಾರಿತ ಕ್ಷೇತ್ರ ವಿಂಗಡಣೆಯು ದಕ್ಷಿಣ ರಾಜ್ಯಗಳಿಗೆ ಮಾತ್ರವಲ್ಲದೆ ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಿಗೂ ಅಸ್ತಿತ್ವದಲ್ಲಿರುವ ಸ್ಥಾನಗಳ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ ಎಂದು ಹೇಳಿ ಡಿಎಂಕೆ ಈ ವಿಷಯದ ಬಗ್ಗೆ ಇತರ ಪಕ್ಷಗಳೊಂದಿಗೆ ಸಮನ್ವಯ ಸಾಧಿಸಲು ನಿರ್ಧರಿಸಿದೆ.