(ನ್ಯೂಸ್ ಕಡಬ) newskadaba.com ಫೆ. 28 ಬೆಂಗಳೂರು: ಮುಂದಿನ ಎರಡು ದಿನಗಳ ಕಾಲ ಕರ್ನಾಟಕದ ಕರಾವಳಿಯಲ್ಲಿ ಉಷ್ಣಅಲೆ ಬೀಸಲಿದ್ದು, ಬಿಸಿಲ ಝಳ ವಿಪರೀತ ಹೆಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್ಎನ್ಡಿಎಂಸಿ) ಎಚ್ಚರಿಕೆ ನೀಡಿದೆ.
ಹಲವಾರು ಪ್ರದೇಶಗಳಲ್ಲಿ ತಾಪಮಾನವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿರುವುದರಿಂದ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ. ತೀವ್ರವಾದ ಶಾಖದ ಅಲೆಯಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಕೆಎಸ್ಎನ್ಡಿಎಂಸಿ ಪ್ರಕಾರ ದ.ಕ.ದ ಸುಳ್ಯದಲ್ಲಿ 40.4°C, ಉಪ್ಪಿನಂಗಡಿ-39.6°C, ಪಾಣೆ ಮಂಗಳೂರು-39.4°C,. ಕೊಕ್ಕಡ 40.4°C, ಉಡುಪಿ ಜಿಲ್ಲೆಯ ಬ್ರಹ್ಮಾವರ-39.1°C, ಕೋಟ- 39.5°C, ವಂಡ್ಸೆ-39.9°C, ಅಜೆಕಾರು-39.5°C, ಉ.ಕನ್ನಡ ಜಿಲ್ಲೆಯ ಸಾವಂತ್ವಾಡ 41.1°C, ಭಟ್ಕಳ-40.4°C, ಬೆಳಿಕೆರೆ-39.8, ಮಾವಳ್ಳಿ-39°C, ಮಾವಿನಕುರುವೈ-39.5°C, ಗಡಸಾಯ- 40.7°C, ಮಿರ್ ಜಾನ್- 40.5°C, ಹೊನ್ನಾವರ- 39.4°C, ಬಸಗೋಡು-40.1°C ತಾಪಮಾನ ದಾಖಲಾಗಿದೆ. ಪ್ರಸ್ತುತ ಇರುವ ಶಾಖದ ಅಲೆಯು ಮುಂದಿನ ಎರಡು ದಿನಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹೇಳಿದೆ.