(ನ್ಯೂಸ್ ಕಡಬ) newskadaba.com ಫೆ. 22. ಬೆಂಗಳೂರು: ಶಿರ್ವದ ಮೂಡುಬೆಳ್ಳೆ ಗ್ರಾಮದ ಕಟ್ಟಿಂಗೇರಿ ಸಮೀಪದ ಕುದ್ರಮಲೆ ಎಂಬಲ್ಲಿ ದುಷ್ಕರ್ಮಿಗಳು ಶಿಲುಬೆಯನ್ನು ಧ್ವಂಸ ಗೊಳಿಸಿರುವ ಘಟನೆ ನಡೆದಿದೆ. ಖಾಸಗಿ ಜಾಗದಲ್ಲಿರುವ ಈ ಶಿಲುಬೆಯನ್ನು ಸುತ್ತಮುತ್ತಲಿನ ಕ್ರೈಸ್ತ ಕುಟುಂಬದವರು ಕಳೆದ 30 ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿದ್ದಾರೆ. ಗುಡ್ಡದ ಮೇಲಿರುವ ಈ ಶಿಲುಬೆಯನ್ನು ಧ್ವಂಸ ಗೊಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದಕ್ಕಿಂತ 15 ದಿನಗಳ ಹಿಂದೆ ಇಲ್ಲಿ ಪ್ರಾರ್ಥನೆ ಸಲ್ಲಿಸಲಾಗಿತ್ತು.


ಆ ಬಳಿಕ ಇತ್ತ ಯಾರೂ ಕೂಡ ಹೋಗಿರಲಿಲ್ಲ. ಫೆ.19 ರಂದು ಸ್ಥಳೀಯರು ಅಲ್ಲಿಗೆ ತೆರಳಿದಾಗ ದುಷ್ಕರ್ಮಿಗಳು ಶಿಲುಬೆಯನ್ನು ಮುರಿದು ಹಾನಿಗೊಳಿಸಿರುವುದು ಕಂಡುಬಂದಿದೆ. ಈ ಬಗ್ಗೆ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.