(ನ್ಯೂಸ್ ಕಡಬ) newskadaba.com ಫೆ. 14 ಲಕ್ನೋ: ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಿಂದ ಉತ್ತರ ಪ್ರದೇಶದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ. ಲಾಭವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹೇಳಿದ್ದಾರೆ. ಇಂದು ಲಕ್ನೋದಲ್ಲಿ ನಡೆದ 114 ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ಪ್ರತಿ 6 ವರ್ಷಗಳಿಗೊಮ್ಮೆ ಕುಂಭ ಮತ್ತು ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭವನ್ನು ಆಯೋಜಿಸುವ ಅವಕಾಶ ಸಿಗುತ್ತದೆ. ನಾವು ಮಾಡುವ ಎಲ್ಲಾ ಚಟುವಟಿಕೆಗಳು ನಮ್ಮ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.
ಕುಂಭಮೇಳವನ್ನು ಆಯೋಜಿಸಲು ಒಟ್ಟು 1,500 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಕ್ಕೆ ಪ್ರತಿಯಾಗಿ ನಮ್ಮ ಆರ್ಥಿಕತೆ 3 ಲಕ್ಷ ಕೋಟಿ ರೂ.ಗಳ ಲಾಭ ಪಡೆದಿದೆ. 1,500 ಕೋಟಿ ರೂ. ಹಣವನ್ನು ಕುಂಭಮೇಳಕ್ಕೆ ಮಾತ್ರ ಖರ್ಚು ಮಾಡಿಲ್ಲ. ಪ್ರಯಾಗ್ರಾಜ್ ನಗರದ ನವೀಕರಣಕ್ಕೆ ಖರ್ಚು ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.