ಏಣಿತಡ್ಕ-2 ಅಂಗನವಾಡಿ ಕಟ್ಟಡ ಉದ್ಘಾಟನೆ ►ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸಬೇಕು- ಎಸ್.ಅಂಗಾರ

(ನ್ಯೂಸ್ ಕಡಬ) newskadaba.com ಕಡಬ, ನ.11. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು. ಗ್ರಾಮ ಪಂಚಾಯಿತಿ ಕೊಯಿಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಏಣಿತಡ್ಕ-2 ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.

ಸುಳ್ಯ ಶಾಸಕ ಎಸ್.ಅಂಗಾರ ಅವರು ಉದ್ಘಾಟನೆ ನೆರವೇರಿಸಿದ ಮಾತನಾಡಿ ದೇಶದ ಆಸ್ತಿಗಳಾದ ಮುದ್ದುಮಕ್ಕಳಲ್ಲಿ ಉತ್ತಮ ಸಂಸ್ಕಾರ ನೀಡಿ ಅವರನ್ನು ದೇಶಪ್ರೇಮಿಗಳನ್ನಾಗಿ ರೂಪಿಸುವ ಮಹತ್ತರ ಕಾರ್ಯವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕಾಗಿದೆ ಎಂದರು. ವಿದ್ಯೆ ಎನ್ನುವುದು ಕೇವಲ ಪುಸ್ತಕದ ವಿಚಾರವನ್ನು ಮಕ್ಕಳಿಗೆ ಭೋದನೆ ಮಾಡುವುದಲ್ಲ, ಅವರಿಗೆ ಪಠ್ಯದೊಂದಿಗೆ ಜೀವನ ಪಾಠವನ್ನು ಕಲಿಸಬೇಕು ಹಾಗಾದಾಗ ಮಾತ್ರ ನಮ್ಮ ಹಿರಿಯ ಉದ್ದೇಶ ಈಡೇರುತ್ತದೆ ಎಂದು ಹೇಳಿದ ಶಾಸಕರು ಸರಕಾರಗಳು ಯೋಜನೆಗಳನ್ನು ಜಾರಿ ಮಾಡುವಾಗ ಅವುಗಳ ಗುಣಮಟ್ಟಗಳನ್ನು ಕಾಯ್ದುಕೊಳ್ಳಬೇಕು ಹೊರತು ಕೇವಲ ಪ್ರಚಾರಕ್ಕೋಸ್ಕರ ಆಗಿರಬಾರದು, ಇಂದು ಪೌಷ್ಟಿಕ ಆಹಾರ ನೀಡುವ ಭರದಲ್ಲಿ ಎಲ್ಲಾ ರಾಸಾಯನಿಕ ತುಂಬಿದ ಆಹಾರಗಳನ್ನು ನೀಡಲಾಗುತ್ತದೆ. ನಾವು ರಾಸಾಯನಿಕ ಆಹಾರ ಪದಾರ್ಥಗಳ ಬದಲು ಸಾವಯವಕ್ಕೆ ಹೆಚ್ಚಿನ ಒತ್ತು ನೀಡಿ ಮುಂದಿನ ಪೀಳಿಗೆಯನ್ನು ರೋಗಮುಕ್ತರನ್ನಾಗಿ ಮಾಡಬೇಕು ಎಂದರು.

ಅಂಗನವಾಡಿ ಆವರಣ ಗೋಡೆಯನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಮಾತಾನಾಡಿ ಪ್ರಾಥಮಿಕ ಶಿಕ್ಷಣಕ್ಕೆ ಪೂರಕವಾದ ಅಂಗನವಾಡಿ ಕೇಂದ್ರಗಳನ್ನ ಹಿಂದೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪ್ರಾರಂಭಿಸಲಾಗಿತ್ತು, ಇದೀಗ ಬಹಳಷ್ಟು ಬದಲಾವಣೆಯೊಂದಿಗೆ ಅಂಗನವಾಡಿ ಕೇಂದ್ರಗಳು ಭವಿಷ್ಯದ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿ ಅಂಗವಾಡಿಗೆ ಸಾಧ್ಯವಾದ ಅನುದಾನ ನೀಡುವುದಾಗಿ ಭರಸೆ ನೀಡಿದರು.

ರಾಮ ನಾಯ್ಕ ಕೊರಂತಾಜೆ ಹಾಗೂ ಸಂಕಪ್ಪ ಗೌಡ ಕಕ್ವೆ ಅವರುಗಳು ನಿರ್ಮಾಣ ಮಾಡಿಕೊಟ್ಟ ನೂತನ ಧ್ವಜಸ್ಥಂಭವನ್ನು ಉದ್ಘಾಟಿಸಿದ ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ ಅಂಗನವಾಡಿ ಕೇಂದ್ರಗಳು ಸಂಸ್ಕಾರ ನೀಡುವ ಕೇಂದ್ರಗಳಾದಾಗ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದರು. ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬುಡಲೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯರಾದ ಜಯಂತಿ ಆರ್ ಗೌಡ, ತೇಜಸ್ವಿನಿ ಶೇಖರ್ ಗೌಡ, ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯರಾದ ಹರಿಣಿ ಪುರಂದರ, ತಿಮ್ಮಪ್ಪ ಗೌಡ, ಅಭಿವೃದ್ಧಿ ಅಧಿಕಾರಿ ನಮಿತಾ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಸುಜಾತ, ಸ್ತ್ರೀಶಕ್ತಿ ಸಂಘದ ಸುನಂದಾ ಬಾಲಕೃಷ್ಣ ನಾಯ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಏಣಿತಡ್ಕದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಅಂಗವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷ ಸುಂದರ ನಾಯ್ಕ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಯಶೋದಾ ವರದಿ ಮಂಡಿಸಿದರು. ಕಾರ್ಯಕ್ರಮ ನಿಮಿತ್ತ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧಾ ವಿಜೇತರ ಪಟ್ಟಿಯನ್ನು ಪುಷ್ಪಾ ಪುರಂದರ ವಾಚಿಸಿದರು. ಗ್ರಾ.ಪಂ ಸದಸ್ಯೆ ಪ್ರೇಮಾ ಮಹಾಬಲ ನಾಯ್ಕ ವಂದಿಸಿದರು. ರಾಮಚಂದ್ರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group