ಅಸಹಾಯಕ ಯುವಕನಿಗೆ ನೆರವು ನೀಡಿದ ಉಪ್ಪಿನಂಗಡಿ ಆಟೋ ಚಾಲಕರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.8. ಗ್ರಾಮೀಣ ಭಾಗದ ಆಟೋ ರಿಕ್ಷಾ ಚಾಲಕರು ಸಂಕಷ್ಟದ ಬದುಕು ಸಾಗಿಸಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿರುವುದು ಸಾಮಾನ್ಯ. ಆದರೆ ತಮ್ಮ ಸಮಸ್ಯೆಗಳ ನಡುವೆಯೂ ಉಪ್ಪಿನಂಗಡಿಯ ನೇತ್ರಾವತಿ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದವರು ಅಸಾಹಯಕರೊಬ್ಬರಿಗೆ ನೆರವಾಗುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.

ಅಪರಿಚಿತ ಊರಿನಲ್ಲಿ ಬಸ್ಸಿಗೆ ಹಣವಿಲ್ಲದೆ ಒಬ್ಬಂಟಿಯಾಗಿದ್ದ ಚಿತ್ರದುರ್ಗದ ಯುವಕನಾದ ಮೋಹನ್‌ ಅವರಿಗೆ ಆಟೋ ರಿಕ್ಷಾದವರು ಹಣ ಸಂಗ್ರಹಿಸಿ ಅವರನ್ನು ಮರಳಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.

ಚಿತ್ರದುರ್ಗದ ಹೊಳಲ್ಕೆರೆಯವರಾಗಿದ್ದ ಮೋಹನ್‌ ಅವರ ಗೆಳೆಯ ಪುತ್ತೂರಿನಲ್ಲಿ ಕೆಲಸಕ್ಕಿದ್ದರು. ಆತನಿಗೆ ನೀಡಿದ್ದ ಸಾಲವನ್ನು ವಸೂಲಿ ಮಾಡುವ ಮತ್ತು ಪುತ್ತೂರಿನಲ್ಲಿಯೇ ಕೆಲಸ ಮಾಡುವ ಉದ್ದೇಶವನ್ನಿಟ್ಟುಕೊಂಡು ಎರಡು ದಿನಗಳ ಹಿಂದೆ ಪುತ್ತೂರಿಗೆ ಆಗಮಿಸಿದ್ದರು. ಆದರೆ ಇವರ ಸ್ನೇಹಿತ ಪುತ್ತೂರಿನಲ್ಲಿ ಕೆಲಸ ಬಿಟ್ಟು ಮುಂಬಯಿಗೆ ತೆರಳಿದ್ದ. ಇದರಿಂದ ಲೆಕ್ಕದ ಹಣ ಹಿಡಿದು ಕೊಂಡು ಬಂದ ಇವರು ಕೈಯಲ್ಲಿ ಹಣವಿಲ್ಲದೆ ಪುತ್ತೂರಿನಲ್ಲಿ ಸಿಲುಕಿಕೊಳ್ಳುವಂತ ಪರಿಸ್ಥಿತಿ ಬಂತು.

ಶುಕ್ರವಾರ ಪುತ್ತೂರು ಬಸ್‌ನಿಲ್ದಾಣದಲ್ಲಿ ಅವರ ಸಂಕಷ್ಟದ ಸ್ಥಿತಿ ಕಂಡು ಕೂಡಲೇ ಕಾರ್ಯಪ್ರವೃತ್ತರಾದ ನೇತ್ರಾವತಿ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದವರು ಪರಸ್ಪರ ಕೈಜೋಡಿಸಿ ಪ್ರಯಾಣ, ಊಟ ಸೇರಿದಂತೆ ಊರಿಗೆ ತಲುಪಲು ಸಾಕಾಗುವಷ್ಟು ಹಣ ಸಂಗ್ರಹಿಸಿ ಮೋಹನ್‌ ಅವರಿಗೆ ಹಸ್ತಾಂತರಿಸಿದರು. ನೇತ್ರಾವತಿ ಆಟೋರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ಕೆ.ಎಸ್‌. ಅಬ್ದುಲ್‌ ಲತೀಫ್, ಜತೆ ಕಾರ್ಯದರ್ಶಿ ಖಲಂದರ್‌ ಶಾಫಿ, ಸಂಘಟನಾ ಕಾರ್ಯದರ್ಶಿ ಬಶೀರ್‌ ಗಾಂಧಿಪಾರ್ಕ್‌, ಸದಸ್ಯ ಅಬ್ದುರ್ರಹ್ಮಾನ್‌ ಕಡವಿನ ಬಾಗಿಲು ಈ ಸಂದರ್ಭದಲ್ಲಿ ಇದ್ದರು.

error: Content is protected !!

Join the Group

Join WhatsApp Group