ಕಡಬ: ರೈತ ಜನ ಜಾಗೃತಿ ಸಮಾವೇಶ ►ರೈತರ ಉತ್ಪಾದನೆಗೆ ಸರಿಯಾದ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ-ಸುಬ್ರಹ್ಮಣ್ಯ ಶಾಸ್ತ್ರಿ

(ನ್ಯೂಸ್ ಕಡಬ) newskadaba.com ಕಡಬ, ಅ.31. ರೈತರ ಉತ್ಪಾದನೆಗೆ ಸರಿಯಾದ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದು, ರೈತರ ಉತ್ಪಾದನೆ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ದರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಆಗ್ರಹಿಸಿದ್ದಾರೆ.

ಅವರು ಕಡಬ ಸಂತೆಕಟ್ಟೆ ಬಳಿ ಲಿಂಗ್ಸನ್ಸ್‌ ಬಿಲ್ಡಿಂಗ್ನ ವಠಾರದಲ್ಲಿ ನಡೆದ ರೈತ ಜನ ಜಾಗೃತಿ ಸಮಾವೇಶ ಹಾಗೂ ಕ.ರಾ.ರೈತ ಸಂಘ ಕಡಬ ತಾಲೂಕು ಸಮಿತಿ ರಚನೆ ಮತ್ತು ರೈತರ ಕುಮ್ಕಿ ಜಮೀನಿನ ವಿಚಾರ, ರೈತರ ಸಾಲ ಮನ್ನಾ, ಕಸ್ತೂರಿ ರಂಗನ್ ವರದಿಯ ವಿರೋಧದ ಸಭೆಯಲ್ಲಿ ಮಾತನಾಡಿ, ಯಾವ ಸರಕಾರಗಳು ಅಧಿಕಾರಕ್ಕೆ ಬಂದರೂ ರೈತರ ಸಮಸ್ಯೆಗಳು ಕಡಿಮೆಯಾಗಿಲ್ಲ ಸಂಘಟನೆ, ಹೋರಾಟ ಜೀವಂತವಾಗಿ ಇಲ್ಲದಿದ್ದರೆ ರೈತರು ಜೀವಂತ ಇರುವುದಿಲ್ಲ, ಇಂದು ಕೃಷಿ ಚಟುವಟಿಕೆಗೆ ಮಾಡಿದ ಸಾಲವನ್ನು ಅದರಲ್ಲಿಯೇ ತೀರಿಸಲು ಸಾಧ್ಯವಿಲ್ಲ ಇದು ಸರಕಾರಗಳಿಗೆ ಅರ್ಥವಾಗಿದ್ದರೂ ಪರಿಹರಿಸಲು ಮಾತ್ರ ಯಾವ ಸರಕಾರಗಳು ಮುಂದೆ ಬರುತ್ತಿಲ್ಲ ಎಂದು ಹೇಳಿದ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿಯವರು ರೈತರ ಉತ್ಪಾದನೆ ವೆಚ್ಚದ ಒಂದೂವರೆ ಪಟ್ಟು ಆದರೂ ದರ ನಿಗದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಜಿ.ಪ. ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ, ಕುಮ್ಕಿ ಹಕ್ಕು ಸರಕಾರ ನೀಡಬೇಕು ಅಲ್ಲದೆ ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು ಈ ಬಗ್ಗೆ ನಾವು ಸಂಘಟಿತರಾಗಿ ಹೋರಾಟ ಮಾಡಬೇಕು ಆಗ ಮಾತ್ರ ನಮ್ಮ ಬೇಡಿಕೆ ಈಡೇರಲು ಸಾಧ್ಯ, ನಾವು ಕೇಂದ್ರದಲ್ಲಿ ಮೋದಿ ಸರಕಾರ ಬಂದಾಗ ತುಂಬಾ ಭರವಸೆ ಇಟ್ಟುಕೊಂಡಿದ್ದೆವು ಆದರೆ ಅವರು ಶ್ರೀಮಂತರ ಪರವಾಗಿ ಇದ್ದಾರೆ ವಿನಾಃ ರೈತರ ಸಾಲ ಮನ್ನಾವಾಗಲಿ ರೈತರ ಪರ ಯಾವುದೇ ಯೋಜನೆಗಳಿಲ್ಲದೆ ದೊಡ್ಡ ಕಂಪೆನಿಗಳ ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ ಎಂದು ಸೈಯದ್ ಮೀರಾ ಸಾಹೇಬ್ ಆರೋಪಿಸಿದರು.

ವೇದಿಕೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಈಶ್ವರ ಭಟ್ ಬಡಿಲ, ಉದ್ಯಮಿ ಕೆ.ಟಿ. ತೋಮ್ಸನ್ ಪ್ರಮುಖರಾದ ಶಶಿ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಸಜಿತ್ ಅಬ್ರಹಾಂ, ಜೋಕಿಂ ರೋಡ್ರಿಗಸ್, ಚಂದ್ರಶೇಖರ ಗೌಡ ಕೋಡಿಬೈಲು, ಜನಾರ್ಧನ ಗೌಡ ಪಣೆಮಜಲು ಮೊದಲಾದವರು ಉಪಸ್ಥಿತರಿದ್ದರು.

ಕಡಬ ತಾಲೂಕು ರೈತ ಸಂಘ ಸಮಿತಿ ರಚನೆ ಕಡಬ ತಾಲೂಕು ರೈತ ಸಂಘ ಹಸಿರು ಸೇನೆಯ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ವಿಕ್ಟರ್ ಮಾರ್ಟಿಸ್ ಹಳ್ಳಂಗೇರಿ, ಉಪಾಧ್ಯಕ್ಷರಾಗಿ ಸಜಿತ್ ಅಬ್ರಹಾಂ, ಪ್ರಧಾನ ಕಾರ್ಯದರ್ಶಿಯಾಗಿ ಜೋಕಿಂ ರೋಡ್ರಿಗಸ್, ಜತೆ ಕಾರ್ಯದರ್ಶಿಯಾಗಿ ಪದ್ಮನಾಭ ಗೌಡಯವರನ್ನು ಆಯ್ಕೆ ಮಾಡಲಾಯಿತು.

error: Content is protected !!

Join the Group

Join WhatsApp Group