ಅ.2: ಅಂಗನವಾಡಿ ಕೇಂದ್ರಗಳಲ್ಲಿ ‘ಮಾತೃಪೂರ್ಣ ಯೋಜನೆ’ ಜಾರಿ

(ನ್ಯೂಸ್ ಕಡಬ) newskadaba.com ಬೆಂಗಳೂರು,ಸೆ.29. ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳಲ್ಲಿ ಅಪೌಷ್ಟಿಕತೆ ತಡೆಗಟ್ಟುವ ಸಲುವಾಗಿ ಮಹತ್ವಾಕಾಂಕ್ಷಿ ‘ಮಾತೃಪೂರ್ಣ ಯೋಜನೆ’ ಅ.2ರ ಮಹಾತ್ಮ ಗಾಂಧಿ ಜಯಂತಿಯಂದು ಜಾರಿಯಾಗುತ್ತಿದೆ.

ಹೆರಿಗೆ ಸಂದರ್ಭದಲ್ಲಿ ಶಿಶು ಹಾಗೂ ತಾಯಂದಿರ ಮರಣ ತಡೆಗಟ್ಟಲು ಹಾಗೂ ಗರ್ಭಿಣಿ, ಬಾಣಂತಿಯರಲ್ಲಿ ರಕ್ತಹೀನತೆ, ಅಪೌಷ್ಟಿಕತೆ ನಿವಾರಿಸಲು ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟ ನೀಡುವ ಉದ್ದೇಶದಿಂದ 202 ಕೋಟಿ ರು. ಅನುದಾನದಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ರಾಜ್ಯದ 204 ಶಿಶು ಅಭಿವೃದ್ಧಿ ಯೋಜನೆಗಳಲ್ಲಿನ 5.35 ಲಕ್ಷ ಗರ್ಭಿಣಿಯರು, 5.22 ಲಕ್ಷ ಬಾಣಂತಿಯರು, 1.28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೇರಿ ಒಟ್ಟು 12 ಲಕ್ಷ ಅರ್ಹ ಫಲಾನುಭವಿಗಳಿಗೆ 65,911 ಅಂಗನವಾಡಿ ಕೇಂದ್ರಗಳ ಮೂಲಕ ಮಧ್ಯಾಹ್ನ ಪೌಷ್ಟಿಕ ಬಿಸಿಯೂಟವನ್ನು ವಿತರಿಸುವ ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ರಾಜ್ಯಾದಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ನೋಂದಣಿಯಾದ ದಿನದಿಂದ ಹೆರಿಗೆಯಾದ ಆರು ತಿಂಗಳವರೆಗಿನ ಬಾಣಂತಿಯರಿಗೆ ಈ ಸೌಲಭ್ಯ ಲಭ್ಯವಾಗಲಿದೆ.

ಯೋಜನೆ ನಿಮಿತ್ತ ಅಂಗನವಾಡಿಗಳಿಗೆ ಅಗತ್ಯವಿರುವ ತೂಕದ ಯಂತ್ರ, ಸಿಲಿಂಡರ್, ಕುಕ್ಕರ್, ಡಬಲ್ ಬರ್ನಲ್ ಎಲ್‌ಪಿಜಿ ಸ್ಟೌವ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ತೆರಳಿ ಊಟ ಪಡೆಯಲಾಗದ ತಿಂಗಳ ಗರ್ಭಿಣಿ ಹಾಗೂ 45 ದಿನಗಳವರೆಗೆ ಬಾಣಂತಿಗೆ, ಆ ಮನೆಯ ಸದಸ್ಯರು ಬಂದು ಆಹಾರ ತೆಗೆದು ಕೊಂಡು ಹೋಗಬೇಕು. ಸ್ತ್ರೀ ಸಂಘದ ಮಹಿಳೆಯರು, ಆಶಾ ಕಾರ್ಯಕರ್ತೆಯರ ಮೂಲಕ ಪ್ರಚಾರ ನಡೆಸಿ ಅರ್ಹರಿಗೆ ಸೌಲಭ್ಯ ತಲುಪಿಸಲು ಪ್ರಯತ್ನಿಸಲಾಗುವುದು ಎಂದರು.

error: Content is protected !!

Join the Group

Join WhatsApp Group