ಶಿಕ್ಷಕ ಯಾಕೂಬ್ ಅವರಿಗೆ ರಾಷ್ಟ್ರಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 05. ಈ ವರ್ಷದ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಬೆಳ್ತಂಗಡಿ ತಾಲೂಕಿನ ನಡ ಸರಕಾರಿ ಶಾಲೆಯ ಶಿಕ್ಷಕ ಯಾಕೂಬ್ ಕೊಯ್ಯೂರು ಅವರಿಗೆ ಶಿಕ್ಷಕರ ದಿನಾಚರಣೆಯಾದ ಶನಿವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.


ವರ್ಚುವೆಲ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರ್ರಪತಿ ಭವನದಲ್ಲಿ ರಾಷ್ಟ್ರ್ರಪತಿ ರಾಮನಾಥ ಕೋವಿಂದ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ. ರಮೇಶ್ ಪೊಕ್ರಿಯಾಲ್ ಅವರು ಉಪಸ್ಥಿತರಿದ್ದರು.  ಯಾಕೂಬ್ ಅವರ ಸಾಧನೆಗಳ ಬಗ್ಗೆ ಕಿರುಚಿತ್ರವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಮಂಗಳೂರಿನಲ್ಲಿ ಜಿಲ್ಲಾ ಪಂಚಾಯತ್ ವೀಡಿಯೋ ಕಾನ್ಫೆರೆನ್ಸ್ ಹಾಲ್‍ ನಲ್ಲಿ ಯಾಕೂಬ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಷ್ಟ್ರಪತಿಗಳಿಗೆ ಗೌರವ ಸಲ್ಲಿಸಿದರು. ಬಳಿಕ  ಕೇಂದ್ರ ಸರಕಾರದ ಪರವಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಯಾಕೂಬ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ ಅವರು ಉಪಸ್ಥಿತರಿದ್ದರು. ರಾಜ್ಯದಲ್ಲೇ ಮೊದಲಬಾರಿಗೆ ಗಣಿತ ಪ್ರಯೋಗಾಲಯವನ್ನು ನಡ ಸರಕಾರಿ ಶಾಲೆಯಲ್ಲಿ ಸ್ಥಾಪಿಸಿ, ಗಣಿತವನ್ನು ಸುಲಭವಾಗಿ ಮಕ್ಕಳಿಗೆ ಕಲಿಸುವಲ್ಲಿ ಯಶಸ್ವಿಯಾರುವ ಯಾಕೂಬ್, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬೋಧನೆ, ಪ್ರಯೋಗ, ವೀಡಿಯೋಗಳನ್ನು ಹಂಚಿದ್ದಾರೆ. ರಾಜ್ಯದಲ್ಲೇ ಮಾದರಿಯಾಗಿ ಈ ಗಣಿತ ಪ್ರಯೋಗಾಲಯ ಮೂಡಿಬಂದಿದೆ.

error: Content is protected !!

Join the Group

Join WhatsApp Group