(ನ್ಯೂಸ್ ಕಡಬ) newskadaba.com.ಸುಳ್ಯ,ಆ.11: ಕಳೆದ ಕೆಲ ದಿನಗಳಿಂದ ಕಾಡು ಪ್ರಾಣಿಗಳು ನಾಡಿಗೆ ಬಂದು ಉಪಟಳ ನೀಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದ್ದು ಮಂಡೆಕೋಲು ಗ್ರಾಮದ ದೇವರಗುಂಡ ಆಶಿಕ್ ಹಾಗೂ ದುಗ್ಗಪ್ಪ ದೇವರಗುಂಡರವರ ತೋಟಕ್ಕೆ ಆನೆಗಳ ಹಿಂಡು ಬಂದು ಕೃಷಿ ಹಾಳುಗೆಡವಿರುವುದು ವರದಿಯಾಗಿದೆ.

ಹಲವು ದಿನಗಳಿಂದ ಇಲ್ಲಿನ ಮಂಡೆಕೋಲು, ಅಜ್ಜಾವರ ಹಾಗೂ ಆಲೆಟ್ಟಿ ಭಾಗದಲ್ಲಿ ಆನೆಗಳ ಹಿಂಡು ಸಂಚರಿಸುವುದನ್ನು ಸ್ಥಳೀಯರು ಗಮನಿಸಿದ್ದಾರೆ. ರಾತ್ರಿ ಹೊತ್ತಲ್ಲಿ ಹೆಚ್ಚಾಗಿ ಕಾಣಸಿಗುವಂತಹ ಆನೆಗಳು ಇದೀಗ ಈ ಭಾಗಗಳಲ್ಲಿ ಹಗಲು ಹೊತ್ತಲೇ ಕಣ್ಣಿಗೆ ಬೀಳುತ್ತಿರುವುದು ಹಾಗೂ ಕೃಷಿಭೂಮಿಗೆ ನುಗ್ಗಿ ಕೃಷಿಗೆ ಹಾನಿಮಾಡುತ್ತಿರುವುದು ಕೃಷಿಕರ ನಿದ್ದೆ ಗೆಡಿಸುತ್ತಿದೆ.









