ಕೊರೋನಾ ಸೋಂಕು ವಾಸದ ಪ್ರದೇಶ ಸೀಲ್ ಡೌನ್ ➤ ನೆರೆಮನೆಯವರ ಅವಮಾನಕ್ಕೆ ನೊಂದು ವ್ಯಕ್ತಿ ಆತ್ಮಹತ್ಯೆ… !!!



(ನ್ಯೂಸ್ ಕಡಬ) newskadaba.com ಬೆಂಗಳೂರು: ಜು.21., ಕೊರೊನಾ ಸೋಂಕು ತಗುಲಿದ ಕಾರಣಕ್ಕೆ ಅಕ್ಕಪಕ್ಕದ ಮನೆಯವರು ಅವಮಾನಿಸಿದರು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.






ಹೆಂಡತಿ ಹಾಗೂ ಮಗನಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಅವಮಾನಿಸಿದ್ದರಿಂದ ನೊಂದು ದೊಡ್ಡಬಳ್ಳಾಪುರದ ನಾಗರಾಜು (56) ಎಂಬವರು ಹೆಸರುಘಟ್ಟ ಕೆರೆಯ ಬಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.







ಮೃತ ನಾಗರಾಜು ಪುತ್ರನಿಗೆ ಮೊದಲು ಸೋಂಕು ತಗುಲಿತ್ತು. ನಂತರ ಪತ್ನಿ ಕೊರೊನಾ ಪರೀಕ್ಷೆ ಮಾಡಿಸಿದಾಗ, ಆಕೆಗೂ ಸೋಂಕು ಇರುವುದು ಪತ್ತೆಯಾಗಿದ್ದರಿಂದ ಅವರು ವಾಸವಿದ್ದ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿತ್ತು. ಸೀಲ್‍ಡೌನ್ ವೇಳೆ ಅಕ್ಕಪಕ್ಕದ ಮನೆಯವರು ಮೃತ ನಾಗರಾಜ್ ಕುಟುಂಬಸ್ಥರನ್ನು ಅವಮಾನಿಸಿದ್ದರು. ನಿಮ್ಮಿಂದ ನಮಗೆಲ್ಲ ಸಮಸ್ಯೆ ಆಗುತ್ತಿದೆ. ಎಲ್ಲಾದರೂ ದೂರ ಹೋಗಿ ಎಂದು ಜಗಳವಾಡಿದ್ದರು ಎನ್ನಲಾಗಿದೆ.


ಇದರಿಂದ ತೀವ್ರ ಬೇಸತ್ತ ನಾಗರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

error: Content is protected !!
Scroll to Top