ಸೆಪ್ಟೆಂಬರ್ 9 ರಂದು ► ರಾಮಕುಂಜದಲ್ಲಿ ಬೃಹತ್ ವಿಜ್ಞಾನ ಮೇಳ

(ನ್ಯೂಸ್ ಕಡಬ) newskadaba.com ಕಡಬ,ಸೆ.03, ಬೆಂಗಳೂರಿನ ಸಿಸ್ಕೋ ಸಂಭ್ರಮ ಪ್ರಾಯೋಜಕತ್ವದಲ್ಲಿ ಅಗಸ್ತ್ಯ ಪೌಂಡೇಷನ್ನವರು ನಡೆಸಿಕೊಡುವ ವಿಜ್ಞಾನ ಮಾದರಿಯ ಪ್ರದರ್ಶನ ಹಾಗೂ ಸ್ಪರ್ಧೆ ನಡೆಸುವ ಬೃಹತ್ ವಿಜ್ಞಾನ ಮೇಳ ಕಾರ್ಯಕ್ರಮ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಸೆಪ್ಟೆಂಬರ್ 9 ರಂದು ಶನಿವಾರ ನಡೆಯಲಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ|ಸಂಕೀರ್ತ್ ಹೆಬ್ಬಾರ್ ತಿಳಿಸಿದರು.


ಅವರು ಶನಿವಾರ ಕಾಲೇಜಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿದ್ಯಾರ್ಥಿಗಳ ವಿಜ್ಞಾನ ವಿಚಾರದ ಅಭಿರುಚಿ ಹಾಗೂ ಅವಿಷ್ಕಾರಗಳ ಪ್ರದರ್ಶನ, ಸ್ಪರ್ಧೆಗಳು ಕೇವಲ ಪೇಟೆಪಟ್ಟಣಗಳಿಗೆ ಮಾತ್ರ ಸೀಮಿತಿವಾಗಬಾರದು ಅದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಸಿಗುವಂತಾಗಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ಈ ವಿಜ್ಞಾನ ಮೇಳವನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದರು. ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾ ಸಂಸ್ಥೆಗಳಲ್ಲಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಅವರ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಉಪ್ಪಿನಂಗಡಿಯಿಂದ ಹಿಡಿದು ಸುಬ್ರಹ್ಮಣ್ಯ ತನಕದ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಒಟ್ಟು 45 ಕ್ಕಿಂತಲೂ ಹೆಚ್ಚು ವಿದ್ಯಾ ಸಂಸ್ಥೆಗಳ 1400 ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. ಮಾತ್ರವಲ್ಲದೆ ನಮ್ಮ ವಿದ್ಯಾ ಸಂಸ್ಥೆಗಳ 1500 ವಿದ್ಯಾರ್ಥಿಗಳ ಕೂಡಾ ಭಾಗವಹಿಸುವ ಒಟ್ಟು 3000 ವಿದ್ಯಾರ್ಥಿಗಳ ಮಹಾ ಸಂಗಮ ಇಲ್ಲಿ ನಡೆಯಲಿದೆ. ವಿದ್ಯಾರ್ಥಿಗಳ ವಿಜ್ಞಾನದ ಬಗೆಗಿನ ಆಸಕ್ತಿ ಶಾಲಾ ಪಠ್ಯಕ್ಕೆ ಸಂಬಂಧಪಟ್ಟ ವಿಜ್ಞಾನದ ಪ್ರಯೋಗಕ್ಕೆ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಬೆಂಗಳೂರಿನ ಅಗಸ್ತ್ಯ ಪೌಂಡೇಶನ್ನವರ 75 ಕ್ಕಿಂತಲೂ ಹೆಚ್ಚು ವಿಜ್ಞಾನ ಮಾದರಿಯನ್ನು ಪ್ರದರ್ಶಿಸಲಾಗುತ್ತದೆ. ಮಾತ್ರವಲ್ಲ ವಿದ್ಯಾರ್ಥಿಗಳ ಮಾದರಿಯನ್ನು ಪ್ರದರ್ಶಿಸುವುದಲ್ಲದೆ, ವಿಜ್ಞಾನ ಪ್ರಾಜೆಕ್ಟ್‌ ಹಾಗೂ ಮಾಡೆಲ್ಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.


ಅಪೇಕ್ಷಿತ ವಿದ್ಯಾರ್ಥಿಗಳು ಸೆಪ್ಟೆಂಬರ್ 9 ರಂದು ಬೆಳಿಗ್ಗೆ 8 ಗಂಟೆಗೆ ಕಾಲೇಜಿನಲ್ಲಿ ಇರಬೇಕಾಗುತ್ತದೆ, ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಿಗ್ಗೆ 9.00 ಗಂಟೆಗೆ ಇಸ್ರೋ ಸಂಸ್ಥೆಯ ನಿವೃತ್ತ ವಿಜ್ಞಾನಿ ಪ್ರೊ| ಎಂ.ಎಸ್.ಭಟ್ ವಿಟ್ಲ ಉದ್ಘಾಟನೆ ನೆರವೇರಿಸಲಿದ್ದಾರೆ. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಇ.ಕೃಷ್ಣಮೂರ್ತಿ ಕಲ್ಲೇರಿ ಸಭೆಯ ಅಧ್ಯಕ್ಷತೆವಹಿಸಲಿದ್ದಾರೆ. ಸಿಸ್ಕೋ ಸಂಸ್ಥೆಯ ಇಂಜೀನಿಯರ್ ವಿಭಾಗದ ಮ್ಯಾನೇಜರ್ ಬಿ.ಎಸ್.ಭಾಸ್ಕರ್, ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲಾ ಮುಖ್ಯಗುರು ಸತೀಶ್ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್ ಅಧ್ಯಕ್ಷತೆವಹಿಸಲಿದ್ದಾರೆ. ಎಂದು ಸಂಕೀರ್ತ್ ಹೆಬ್ಬಾರ್ ವಿವರ ನೀಡಿದರು.


ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ರಾಮಾಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್, ವಿಜ್ಞಾನ ಮೇಳದ ಸಂಯೋಜಕಿ ಉಪನ್ಯಾಸಕಿ ದಿವ್ಯಾ, ಉಪನ್ಯಾಸಕ ಕೃಷ್ಣಮೂರ್ತಿ ಕೆಮ್ಮಾರ ಮೊದಲಾದವರು ಉಪಸ್ಥಿರಿದ್ದರು.

error: Content is protected !!

Join the Group

Join WhatsApp Group