ಪೆರಾಬೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭ

(ನ್ಯೂಸ್ ಕಡಬ) newskadaba.com .ಪೆರಾಬೆ,  ಡಿ. 25  ಯಾವುದೇ ಸಂಸ್ಥೆಯ ಇತಿಹಾಸ ತಿಳಿದು ಕೆಲಸ ನಿರ್ವಹಿಸಿದರೆ ಇತಿಹಾಸ ನಿರ್ಮಿಸಲು ಸಾಧ್ಯ ಎಂದು ಸುಳ್ಯ ಶಾಸಕ ಎಸ್ ಅಂಗಾರ ನುಡಿದರು. ಅವರು ಸೋಮವಾರ ರಾತ್ರಿ ಪೆರಾಬೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಟಾಟಿಸಿ ಮಾತನಾಡುತ್ತಿದ್ದರು. ಸ್ವಾರ್ಥ ಬಿಟ್ಟು ಸಮರ್ಪಣಾ ಭಾವದಿಂದ ಸೇವೆ ಮಾಡಿದಾಗ ಭವಿಷ್ಯದಲ್ಲಿ ಇತಿಹಾಸ ನಿರ್ಮಿಸ ಬಹುದು. ಸರಕಾರಿ ಶಾಲೆಗಳನ್ನು ಕ್ಷೇತ್ರದ ಶಾಸಕರಿಂದ ಉಳಿಸಿಕೊಳ್ಳಲು ಅಸಾಧ್ಯವಾದರೂ ಗ್ರಾಮದ ಜನತೆಯಿಂದ ಮಾತ್ರ ಸಾಧ್ಯ. ಇದಕ್ಕಾಗಿ ಗ್ರಾಮದ ಜನತೆ ಖಾಸಗಿ ಶಾಲೆಗಳತ್ತ ಹೆಚ್ಚು ಒಲವು ತೋರಿಸದೇ ಶರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವಾಗಬೇಕು, ಸರಕಾರಿ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬೇಕಾದ ಅನುದಾನಗಳನ್ನು ಪ್ರಾಮಾಣಿಕವಾಗಿ ನೀಡುವುದಾಗಿ ಶಾಸಕರು ಭರವಸೆ ನೀಡಿದರು.


ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ಧನ್ ಮತಾನಾಡಿ, ಮಾನವೀಯ ಮೌಲ್ಯ ಕ್ರೂಡೀಕರಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಬಹುದು ಎಂದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ಮಾತನಾಡಿ ಕಾಲ ಬದಲಾಗಿದೆ ಎನ್ನುತ್ತಾರೆ ಆದರೆ ಕಾಲ ಬದಲಾಗಿಲ್ಲ ಜನತೆಯ ಮನಸ್ಸು ಇಂದು ಸಂಕುಚಿತಗೊಂಡಿದೆ. ಈ ಕಾರಣದಿಂದಾಗಿಯೆ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಸೇರ್ಪಡೆ ಕಡಿಮೆಯಾಗಿದೆ ಎಂದು ವಿಷಾದಿಸಿದರು.ಬಿ ಆರ್‍ಪಿ ದಿನೇಶ್ ಮಾಚಾರ್ ಮಾತನಾಡಿ ಗುಣಮಟ್ಟದ ಶಿಕ್ಷಣವನ್ನು ಸರಕಾರಿ ಶಾಲೆಗಳಿಂದ ಮಾತ್ರ ಪಡೆಯಲು ಸಾಧ್ಯ. ಸರಕಾರಿ ಶಾಲೆಯಲ್ಲಿ ಕಲಿತ ಯಾವುದೇ ವ್ಯಕ್ತಿಯು ತನ್ನ ಭವಿಷ್ಯದ ಜೀವನದಲ್ಲಿ ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡ ನಿದರ್ಶನವಿಲ್ಲ ಎಂದರು. ಅಲ್ಲದೆ ಶಾಲಾ ಅಧೀನದಲ್ಲಿರುವ ಜಾಗದಲ್ಲಿ ಅಡಿಕೆ ಅಥವಾ ಗೇರು ಕೃಷಿ ಮಾಡುವುದರ ಮೂಲಕ ಶಾಲೆಗೆ ಶಾಶ್ವತ ಆದಾಯದ ಮೂಲ ಕಂಡುಕೊಳ್ಳಿ ಎಂದು ತಿಳಿಹೇಳಿದರು.


ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗುಣರವರ ಅಧ್ಯಕ್ಷತೆಯಲಿ ನಡೆದ ಸಮಾರಂಭದ ವೇದಿಕೆಯಲ್ಲಿ ತಾ.ಪಂ ಸದಸ್ಯೆ ತಾರಾ ತಿಮ್ಮಪ್ಪ, ಚೆನೈನ ಉದ್ಯಮಿ ಹೇಮಂತ್ ರೈ ಮನವಳಿಕೆ, ಶುಭ ಹಾರೈಸಿದರು. ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷ ದಯಾನಂದ ರೈ ಮನವಳಿಕೆ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಸಂಜೀವ ಶೆಟ್ಟಿ, ಮೋಹನ್‍ದಾಸ್ ರೈ ಪರಾರಿ, ಎಸ್‍ಡಿಎಂಸಿ ಉಪಾಧ್ಯಕ್ಷ ಶಿವರಾಮ ಗೌಡ, ಚಂದ್ರಶೇಖರ ಗೌಡ ಪೂಂಜ, ವಿಶ್ವನಾಥ ಬೇರ್ಳಪಾಡಿ, ಇಬ್ರಾಹಿಂ ಪೆರಾಬೆ, ನಾಗಪ್ಪಗೌಡ ಮರುವಂತಿಲ, ರಾಧಾಕೃಷ್ಣ ರೈ ಪರಾರಿ, ಪ್ರಶಾಂತ್ ರೈ ಮನವಳಿಕೆ, ವಿದ್ಯಾರ್ಥಿ ನಾಯಕ ಮಾ| ವೈಶಾಖ್ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ವಾರ್ಷಿಕೋತ್ಸವ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಗೆ, ಹಳೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಡೆಸಿದ ವಿವಿಧ ಆಟೋಟ ಸ್ಪರ್ಧೆಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆಯಾಯಿತು.ಶಾಲಾ ಪ್ರಭಾರ ಮುಖ್ಯಗುರು ಹೇಮಲತಾ ಪ್ರದೀಪ್ ಶಾಲಾ ವರದಿ ಮಂಡಿಸಿದರು. ಎಸ್ ಪೂವಪ್ಪ ನಾಯ್ಕ ಸ್ವಾಗತಿಸಿ ಗಂಗಾಧರ ಗೌಡ ಪರಾರಿ ವಂದಿಸಿದರು. ಶಿಕ್ಷಕ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ  ವಿನೋದಾವಳಿಗಳು ನಡೆಯಿತು.

error: Content is protected !!

Join the Group

Join WhatsApp Group