ಹೊಸ ಸಾಲ ಮಂಜೂರಾತಿ ಇಲ್ಲ: ಸಹಕಾರ ಸಂಘಗಳಿಗೆ ಸೂಚನೆ  

(ನ್ಯೂಸ್ ಕಡಬ) newskadaba.com ಕರ್ನಾಟಕ, ಎ.20. ಸಾರ್ವತ್ರಿಕ ವಿಧಾನ ಸಭಾ  ಚುನಾವಣೆ 2018ರ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕುಗಳು ನೀತಿ ಸಂಹಿತೆ ಜಾರಿಯಲ್ಲಿ ಇರುವ ದಿನಾಂಕದವರೆಗೆ ಯಾವುದೇ ಹೊಸ ರೈತರಿಗೆ ಕೃಷಿ ಉದ್ದೇಶಕ್ಕಾಗಿ ರಿಯಾಯಿತಿ ಬಡ್ಡಿ ದರದಲ್ಲಿ ಹೊಸ ಸಾಲವನ್ನು ಮಂಜೂರು ಅಥವಾ ವಿತರಣೆ ಮಾಡುವಂತಿಲ್ಲ. ಆದರೆ ಈಗಾಗಲೇ ಹಿಂದಿನ ವರ್ಷದಲ್ಲಿ ನೀಡಿದ ಸಾಲವನ್ನು ರೈತರು ಮರುಪಾವತಿಸಿದಲ್ಲಿ ನವೀಕರಣ ಮಾಡಬಹುದಾಗಿದೆ.

ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲವನ್ನು ನೀತಿ ಸಂಹಿತೆ ಜಾರಿಯಲ್ಲಿರುವ ದಿನಾಂಕದವರೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಈಗಾಗಲೇ ಸಾಲ ಪಡೆದಿರುವ ಹಳೇ ಗುಂಪಿಗಾಗಲೀ ಅಥವಾ ಹೊಸ ಗುಂಪಿನ ಹೆಸರಿನಲ್ಲಿ ಯಾವುದೇ ಸ್ವಸಹಾಯ ಗುಂಪುಗಳಿಗೆ ಸಾಲ ಮಂಜೂರು ಅಥವಾ ಸಾಲ ವಿತರಣೆ ಮಾಡುವಂತಿಲ್ಲ.  ಈ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಇಲಾಖಾ ಮತ್ತು ಡಿಸಿಸಿ ಬ್ಯಾಂಕಿನ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ರಾಜ್ಯ ಬೆಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group