(ನ್ಯೂಸ್ ಕಡಬ) newskadaba.com ಕಡಬ, ಜೂ. 13. ಕಡಬ ಪೊಲೀಸ್ ಠಾಣೆಯಿಂದ ವಿವಿಧ ಕಡೆ ವರ್ಗಾವಣೆಗೊಂಡ ಆರು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಕರ್ನಾಟಕ ರಾಜ್ಯ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ತಾಲೂಕು ಘಟಕದ ವತಿಯಿಂದ ಗುರುವಾರದಂದು ಠಾಣೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಠಾಣಾ ಉಪನಿರೀಕ್ಷಕ ಅಭಿನಂದನ್ ಮಾತನಾಡಿ, ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳು ವರ್ಗಾವಣೆಗೊಂಡು ಬೇರೆ ಕಡೆ ಹೋಗುತ್ತಿರುವ ಸಂದರ್ಭದಲ್ಲಿ ಸಂಘಟನೆ ಮೂಲಕ ಮಾಡುತ್ತಿರುವ ಈ ಗೌರವ ನಿಜಕ್ಕೂ ಸ್ಮರಣೀಯವಾದದ್ದು. ಇನ್ನಷ್ಟು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಇಂತಹ ಕಾರ್ಯಕ್ರಮ ಸ್ಪೂರ್ತಿಯಾಗಲಿ ಎಂದು ಶುಭ ಹಾರೈಸಿದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ರಾಘವ ಕಳಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸನ್ಮಾನಿತ ಪೊಲೀಸರು ಕಡಬ ಠಾಣೆಯಲ್ಲಿ ಕರ್ತವ್ಯ ನಿಭಾಯಿಸುವ ವೇಳೆ ಸುಳ್ಳು ಕೇಸುಗಳು ಬಂದಾಗ ಅದನ್ನು ಪರಿಶೀಲಿಸಿಯೇ ಮುಂದುವರಿಸಿ ಜನರ ವಿಶ್ವಾಸಗಳಿಸಿದ್ದಾರೆ. ಮುಖ್ಯವಾಗಿ ಜಾತಿನಿಂದನೆಯಂತಹ ಸುಳ್ಳು ಕೇಸುಗಳಿಗೆ ಕಡಿವಾಣ ಬಿದ್ದಿರುವುದು ಸಂತಸದ ಸಂಗತಿ. ಅದರಲ್ಲಿ ವರ್ಗಾವಣೆಯಾಗುತ್ತಿರುವ ಪೊಲೀಸರ ಪಾತ್ರವೂ ಇತ್ತು. ವರ್ಗಾವಣೆಯಾಗಿ ಬೇರೆ ಠಾಣೆಗೆ ಹೋದರೂ ಕರ್ತವ್ಯನಿಷ್ಠೆ ಹೀಗೆ ಮುಂದುವರಿಯಲಿ ಎಂದರು.
ಹೆಡ್ ಕಾನ್ ಸ್ಟೇಬಲ್ ಗಳಾದ ಹರೀಶ್ ಪುಂಚಪ್ಪಾಡಿ, ರಮೇಶ್ ಲಂಭಾಣಿ, ಕಾನ್ಸ್ಟೇಬಲ್ಗಳಾದ ಹರೀಶ್, ವಿಠಲ್ ಜೋಗನ್ನನವರ್, ಸೋಮಯ್ಯ ಹಿರೇಮಠ, ಮಂಜುನಾಥ ಮೊದಲಾದವರು ಸನ್ಮಾನ ಸ್ವೀಕರಿಸಿ, ಸಂಘಟನೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತನಿಖಾ ವಿಭಾಗದ ಅಕ್ಷಯ್ ಡವಗಿ ಇತರ ಪೊಲೀಸ್ ಸಿಬ್ಬಂದಿಗಳು, ಹೋಂ ಗಾರ್ಡ್ ಸಿಬ್ಬಂದಿಗಳು, ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ಭಜನಾ ಮಂಡಳಿ ಅಧ್ಯಕ್ಷ ಸೋಮಪ್ಪ ನಾಯ್ಕ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಕೇರ ಜೊತೆಗಿದ್ದರು. ಸಂಘಟನೆಯ ತಾಲೂಕು ಅಧ್ಯಕ್ಷ ತಾರಾನಾಥ ಕಡಿರಡ್ಕ, ಉಪಾಧ್ಯಕ್ಷ ಸುರೇಶ್ ತೋಟಂತಿಲ, ಜೊತೆ ಕಾರ್ಯದರ್ಶಿ ಲೋಕೇಶ್ ಕಡಿರಡ್ಕ, ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯರಾದ ಶೀನ ಬಾಳಿಲ, ಸಂದೀಪ್ ಪಾಂಜೋಡಿ, ಶಂಕರ್ ಚಾರ್ವಾಕ, ಪುರುಷೋತ್ತಮ ಚಾರ್ವಕ ಸಹಕರಿಸಿದರು.