ಆಟವಾಡಲು ಟ್ರ್ಯಾಕ್ಟರ್ ಹತ್ತಿದ್ದ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 15. ರಸ್ತೆ ಕಾಮಗಾರಿ ಸಲುವಾಗಿ ರಸ್ತೆಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ನಲ್ಲಿ ಚಾಲಕ ಕೀ ಬಿಟ್ಟು ಹೋಗಿದ್ದರ ಪರಿಣಾಮ ಆರು ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕ ಬೆಳ್ಳಂದೂರಿನಲ್ಲಿ ನಡೆದಿದೆ.

ಮೃತಪಟ್ಟ ಬಾಲಕನನ್ನು ಅಮೋಘ್ ಎಂದು ಗುರುತಿಸಲಾಗಿದೆ. ಚಿಕ್ಕ ಬೆಳ್ಳಂದೂರಿನ ಕಾರ್ಮೆಲ್ ರಾಮ್ ಶಾಲೆಯ ಹಿಂಭಾಗದ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಮಳೆಯ ಕಾರಣ ಎರಡು ದಿನಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಬಾಲಕ ಅಮೋಘ್ ಆಟವಾಡುತ್ತಾ ಟ್ರ್ಯಾಕ್ಟರ್ ಹತ್ತಿ ಚಾಲಕನ ಸೀಟಿನಲ್ಲಿ ಕುಳಿತು ಕೀ ತಿರುಗಿಸಿದ್ದಾನೆ. ಪರಿಣಾಮ ಟ್ರ್ಯಾಕ್ಟರ್ ಚಾಲನೆಯಾಗಿ ಎಂಜಿನ್ ಮೇಲಕ್ಕೆದ್ದಿದ್ದು, ಬಾಲಕ ಹಿಂದಕ್ಕೆ ಹಾರಿ ಟ್ರೇಲರ್ ಗೆ ತಲೆಬಡಿದು ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ತಕ್ಷಣವೇ ಸ್ಥಳೀಯರು ಬಾಲಕನನ್ನು ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ಟ್ರ್ಯಾಕ್ಟರ್ ಚಾಲಕ ರಂಗಪ್ಪ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

error: Content is protected !!
Scroll to Top