ಕ್ಯಾಂಪಸ್ ಫ್ರಂಟ್ ಸದಸ್ಯತ್ವ ಅಭಿಯಾನ ಗಂಗಾವತಿಯಲ್ಲಿ ಉದ್ಘಾಟನೆ ➤ ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ಸೇರ್ಪಡೆ

(ನ್ಯೂಸ್ ಕಡಬ) newskadaba.com ಗಂಗಾವತಿ, ಜು. 26. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ 2022 ನೇ ಸಾಲಿನ ಸದಸ್ಯತ್ವ ಅಭಿಯಾನದ ಉದ್ಘಾಟನಾ ಸಮಾರಂಭವು ಗಂಗಾವತಿಯಲ್ಲಿ ನಡೆಯಿತು.

ನಗರದ ಬಸ್ಸು ನಿಲ್ದಾಣದ ಬಳಿಯಿಂದ ಕರ್ನೂಲ್ ಸಾಹೇಬ್ ದರ್ಗಾ ಮೈದಾನದವರೆಗೆ ವಿದ್ಯಾರ್ಥಿಗಳಿ ಜಾಥಾ ನಡೆಸಿ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಅಧ್ಯಕ್ಷತೆ ವಹಿಸಿ ಸದಸ್ಯತ್ವ ಕೂಪನ್ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಅಭಿಯಾನವನ್ನು ಉಧ್ಘಾಟಿಸಿದರು. ನಂತರ ಮಾತನಾಡಿದ ಅಥಾವುಲ್ಲ ಪುಂಜಾಲಕಟ್ಟೆ ಈ ಬಾರಿಯ ಸದಸ್ಯತ್ವ ಅಭಿಯಾನವು ನಮ್ಮ ಶಿಕ್ಷಣ, ಹಕ್ಕು, ಪ್ರತಿರೋಧ ಎಂಬ ಘೋಷವಾಕ್ಯದಡಿ ನಡೆಸುತ್ತಿದ್ದು, ಈ ದೇಶದ ಇತಿಹಾಸದಲ್ಲಿ ಪ್ರಭುತ್ವದ ಅಕ್ರಮ ಧೋರಣೆಯ ವಿರುದ್ಧ ಹೋರಾಟ ರಂಗದಲ್ಲಿ ನಾಯಕತ್ವವನ್ನು ನೀಡಿರುವಂತದ್ದು ವಿದ್ಯಾರ್ಥಿಗಳು ಮತ್ತು ಯುವ ಸಮೂಹವಾಗಿದೆ. ಶಿಕ್ಷಣ ನೀಡುವಂತದ್ದು ಸರ್ಕಾರದ ಔದಾರ್ಯವಲ್ಲ ಬದಲಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಶಿಕ್ಷಣವನ್ನು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು. ಕ್ಯಾಂಪಸ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಮಾತನಾಡಿ, ನಮ್ಮ ರಾಷ್ಟ್ರೀಯ ನಾಯಕರನ್ನು ಬಂಧಿಸುವ ಮೂಲಕ ಈ ಹೋರಾಟವನ್ನು ಬುಡಮೇಲು ಗೊಳಿಸಬಹುದೆಂದು ಭಾವಿಸಿರಬಹುದು. ಆದರೆ ಅಂತಹ ಸಾವಿರಾರು ನಾಯಕರನ್ನು ನಾವು ಈಗಾಗಲೇ ಸಿದ್ಧಪಡಿಸಿಟ್ಟಿದ್ದೇವೆ. ದೇಶದಲ್ಲಿ ವಿದ್ಯಾರ್ಥಿಗಳ ವಿರುದ್ಧ ಬರುವ ಅನ್ಯಾಯದ ಸಂಕೋಲೆಗಳನ್ನು ನಿರ್ನಾಮಗೊಳಿಸಲು ದೇಶದಲ್ಲಿ ಕ್ರಾಂತಿಯನ್ನು ಮೊಳಗಿಸಿ ನವಭಾರತವನ್ನು ಕಟ್ಟಲು ಕ್ಯಾಂಪಸ್ ಫ್ರಂಟಿನೊಂದಿಗೆ ಕೈಜೋಡಿಸಿ ಎಂದು ಕರೆ ನೀಡಿದರು.

ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಬಗ್ಗೆ ಸರ್ಕಾರ ಕಿಂಚಿತ್ತೂ ಗಮನಹರಿಸುತ್ತಿಲ್ಲ,‌ ಮೊದಲನೆಯದಾಗಿ ರಾಜ್ಯ ಬಜೆಟ್ ನಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವೆಸಗಿದ್ದು, ಇದೀಗ ಶೈಕ್ಷಣಿಕ ಕ್ಷೇತ್ರವನ್ನು ನೋಡಿದರೆ ಶಾಲಾ ಕಾಲೇಜುಗಳ ಅಭಿವೃದ್ದಿಯು ಕನಸಾಗಿಯೇ ಉಳಿದಿದೆ. ರಾಯಚೂರಿನ ಸಿಂಧನೂರಿನಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದರೆ ಪ್ಯಾಂಟು ಕಳಚಿ ತಲೆ ಮೇಲೆ ಇಟ್ಟು ಹೊಳೆ ದಾಟಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಅಯೋಗ್ಯ ಶಿಕ್ಷಣ ಸಚಿವರು ಮಾತ್ರ ಹೇಗೆ ಶಾಲಾ ಕಾಲೇಜುಗಳಲ್ಲಿ ಕೋಮುವಾದವನ್ನು ತುರುಕಬಹುದು ಎಂಬ ಆಲೋಚನೆಯಲ್ಲಿಯೇ ಮುಳುಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುಧ್ದ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ ಕಿಡಿಕಾರಿದರು. ವಿಜಯನಗರ ಜಿಲ್ಲಾ ನಾಯಕಿ ಶಾಹಿನ್ ರವರು ಮಾತನಾಡಿ ಹಿಜಾಬ್ ಯಾವತ್ತೂ ಯಾರ ಶಿಕ್ಷಣಕ್ಕೂ ಸಮಸ್ಯೆಯಾಗಿರಲಿಲ್ಲ. ಇದು ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸಲು ಬಿಜೆಪಿ ಮತ್ತು ಸಂಘಪರಿವಾರ ನಡೆಸಿದ ಷಡ್ಯಂತ್ರವಾಗಿದೆ ಎಂದರು. ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಸದಸ್ಯತ್ವ ಪಡೆದರು. ವೇದಿಕೆಯಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಚಾಂದ್ ಸಲ್ಮಾನ್, ವಿಜಯನಗರ ಜಿಲ್ಲಾ ನಾಯಕಿ ಆರಿಫಾ ಹೊಸಪೇಟೆ ಹಾಗೂ ಗಂಗಾವತಿ ಜಿಲ್ಲಾಧ್ಯಕ್ಷರಾದ ಅತೀಕುರ್ರಹ್ಮಾನ್ ಉಪಸ್ಥಿತರಿದ್ದರು.

Also Read  ಮರ್ಹೂಂ ಆಸಿದ್ ಸ್ಮರಣಾರ್ಥ ಎಸ್ಡಿಪಿಐ ಪಾಂಡವರಕಲ್ಲು ವತಿಯಿಂದ ಬೃಹತ್ ರಕ್ತದಾನ ಶಿಬಿರ

error: Content is protected !!
Scroll to Top