ಜಿಲ್ಲೆಯಾದ್ಯಂತ ಜೆಡಿಎಸ್ ಪ್ರಬಲವಾಗಿ ಪರಿವರ್ತನೆಗೊಳ್ಳುತ್ತಿದೆ ► ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬ್ ಹೇಳಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.6. ರಾಜ್ಯದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದು ಜಿಲ್ಲೆಯಾದ್ಯಂತ ಜಾತ್ಯಾತೀತ ಜನತಾದಳ ಪ್ರಬಲವಾಗಿ ಬಲವರ್ಧನೆಯಾಗುತ್ತಿದೆ. ಬಿಜೆಪಿ ಕಾಂಗ್ರೆಸ್ನಲ್ಲಿ ಭ್ರಮನಿರಸನಗೊಂಡಿರುವ ಹಲವಾರು ಪದಾಧಿಕಾರಿಗಳು, ಕಾರ್ಯಕರ್ತರು ಜೆಡಿಎಸ್ ಪಕ್ಷವನ್ನು ಸೇರುತ್ತಿದ್ದಾರೆ ಎಂದು ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಹೇಳಿದ್ದಾರೆ.

ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ಆದಿತ್ಯವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಯ್ಯದ್ ಮೀರಾ ಸಾಹೇಬ್, ಬೇರೆ ಬೇರೆ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡು ಮಾತನಾಡಿದರು. ನುಡಿದಂತೆ ನಡೆದು ರಾಜ್ಯಾದ್ಯಂತ ರೈತರ ಸಾಲ ಮನ್ನಾ ಮಾಡಿ ಮಾದರಿ ಮುಖ್ಯಮಂತ್ರಿ ಎಣಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತನ್ನ ಅಧಿಕಾರಾವಧಿಯಲ್ಲಿ ನೀಡಿದ ಜನಪರ ಯೋಜನೆಗಳು, ಪಿಂಚಣಿ ಯೋಜನೆಗಳು ಮಹಿಳಾ ಮೀಸಲಾತಿ, ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆಗಳ ಸಂಪೂರ್ಣ ಡಾಮರೀಕರಣ ಯೋಜನೆಯೊಂದಿಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಿದ್ದು ಕೃಷಿಕರಿಗೆ ಉಚಿತ ವಿದ್ಯುತ್ ಸೌಲಭ್ಯದೊಂದಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಮಾದರಿ ಮುಖ್ಯಮಂತ್ರಿ ಎಣಿಸಿಕೊಂಡಿರುವ ಕುಮಾರಸ್ವಾಮಿಯವರು ಮತ್ತೇ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದ ಮೀರಾ ಸಾಹೇಬರು ಈಗ ದೇಶದಲ್ಲಿ ಬಿಜೆಪಿ ಸರಕಾರ ನೋಟ್ ಬ್ಯಾನ್ ಮಾಡಿದ ಮೂಲಕ ಜಿಎಸ್ಟಿ ಜಾರಿಗೆ ತಂದು ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿ ಜನರನ್ನು ಸಂಕಷ್ಟದಲ್ಲಿ ಸಿಲುಕಿದರೆ ರಾಜ್ಯದ ಇಬ್ಬಗೆ ನೀತಿಯಿಂದ ಜನರ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. 2 ಪಕ್ಷಗಳು ಅಧಿಕಾರದ ಆಸೆಯಿಂದ ಕೆಸರೆರೆಚಾಟದಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂಧಿಸಲು ಸಮಯವೇ ಇಲ್ಲದಂತಾಗಿದೆ. ಕಸ್ತೂರಿ ರಂಗನ್ ವರದಿಯಿಂದ ನಾವು ಈವರೆಗೆ ತಿಳಿದುಕೊಂಡಂತೆ ವರದಿ ಡಿನೋಟಿಫಿಕೇಶನ್ ಆಗಿದ್ದು ಗಾಡ್ಗಿಲ್ ವರದಿ, ಆನೆಕಾರಿಡಾರ್ ಯೋಜನೆ ಡಿನೋಟಿಫಿಕೇಶನ್ ಆಗಿದೆ. ರಿಸರ್ವ್ ಫಾರೆಸ್ಟ್‌, ವೆಸ್ಟರ್ನ್‌ ಫಾರೆಸ್ಟ್‌, ಮೈನರ್ ಫಾರೆಸ್ಟ್‌, ವೈಡ್ಲೆಸ್ ಅಲ್ಲದೆ ಸರಕಾರದ ಕುಮ್ಕಿ ಸ್ಥಳಗಳು ಇದರೊಂದಿಗೆ ಸೇರಿಸಿ ಇದೆಲ್ಲವನ್ನೂ ಸ್ಯಾಟ್ಲೈಟ್ ಮುಖಾಂತರ ಬಹುರಾಷ್ಟ್ರೀಯ ಕಂಪನಿಗಳು ಒಗ್ಗೂಡಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮೂರನೇ ಬಾರಿ ಕೂಡ ನೋಟಿಫಿಕೇಶನ್ ಆಗಿದ್ದು ಇನ್ನು ರಾಷ್ಟ್ರಪತಿ ಅಂಕಿತಕ್ಕೆ ಮಾತ್ರ ಬಾಕಿ ಉಳಿದಿದೆ. ಚಾಮರಾಜನಗರದ ಕೊಲ್ಲೆಗಾಲದಿಂದ ಹಿಡಿದು ಬೆಳಗಾಂ ತನಕ 14,00,000 ಹೆಕ್ಟೇರ್ ಭೂಮಿಯನ್ನು 1400 ಗ್ರಾಮಗಳನ್ನು ಒಳಗೊಂಡು ಯೋಜನೆಗೆ ಸ್ವಾಧೀನ ಹೊಂದಿ ಕ್ರಮ ಕೈಗೊಳ್ಳುವ ಬಗ್ಗೆ ಈಗಾಗಲೆ ಸುಳ್ಯ ಪುತ್ತೂರು ಬೆಳ್ತಂಗಡಿಯ ಹಲವಾರು ಗ್ರಾಮಗಳು ಒಳಗೊಂಡಿದ್ದು ಕೆಲವು ಕಡೆಗಳಲ್ಲಿ ರಸ್ತೆ ಸಂಚಾರವನ್ನು ಕೂಡ ಮೊಟಕುಗೊಳಿಸಿ ರೈತರ ಪ್ರವೇಶ ನಿಷೇಧಕ್ಕೆ ಕ್ರಮ ಕೈಗೊಂಡಿರುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಪುತ್ತೂರು ತಾಲೂಕಿನ ಬಲ್ಯ, ಕೌಕ್ರಾಡಿ, ಶಿರಾಡಿ, ಸಿರಿಬಾಗಿಲು ಕೊಂಬಾರು ಗ್ರಾಮಗಳ ಜನರಿಗೂ ತೊಂದರೆಯಾಗುವ ಲಕ್ಷಣಗಳು ಕಂಡುಬರುತ್ತದೆ. ಈ ಬಗ್ಗೆ ಈಗಾಗಲೆ ಈ ಭಾಗದ ಗ್ರಾಮಸ್ಥರು ಎಚ್ಚರಗೊಂಡಿದ್ದು ತಮ್ಮ ನೆಲ ಜಲ ವಾಸ್ತವ್ಯದ ಮನೆ ಕೃಷಿ ಭೂಮಿಯನ್ನು ರಕ್ಷಿಸಿಕೊಳ್ಳಲು ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿದ್ದು ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಕಡಬ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲೂಸಿ ಮಾರ್ಟಿಸ್ ಮಾತನಾಡಿ ನಮ್ಮ ರಾಜ್ಯವನ್ನು ದೇಶವನ್ನಾಳಿದ ಮಾಜಿ ಪ್ರಧಾನಿ ದೇವೆಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಹಿಳಾ ಸಬಳೀಕರಣದೊಂದಿಗೆ ಮಹಿಳಾ ಮೀಸಲಾತಿಯನ್ನು ಶೇ.50 ಏರಿಸಿದ್ದು ಗ್ರಾ.ಪಂ.ನಿಂದ ಹಿಡಿದು ತಾಲೂಕು ಪಂಚಾಯತ್ ಜಿ.ಪಂ., ವಿಧಾನಸಭೆ, ಪಾರ್ಲಿಮೆಂಟ್ನವರೆಗೂ ಮಹಿಳಾ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಯಾಗಲು ಪ್ರಯತ್ನಿಸಿದ ಮಹಾನು ನಾಯಕರಾಗಿದ್ದಾರೆ. ಅವರು ಇನ್ನೊಮ್ಮೆ ಈ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಮೂಲಕ ಕುಮಾರಸ್ವಾಮಿ ಸರಕಾರ ಅಸ್ಥಿತ್ವಕ್ಕೆ ಬರಬೇಕಾಗಿದ್ದು ಪ್ರತೀ ಬೂತ್ ಮಟ್ಟದಿಂದ ಮಹಿಳೆಯರಾದ ನಾವು ಎಚ್ಚೆತ್ತುಕೊಂಡು ಜೆಡಿಎಸ್ ನತ್ತ ಒಲವು ತೋರಬೇಕೆಂದು ಹೇಳಿದರು.


ಕಡಬ ಬ್ಲಾಕ್ ಜೆಡಿಎಸ್ ಮಾಜಿ ಅಧ್ಯಕ್ಷ ಚಂದ್ರಶೇಖರ ಗೌಡ ಮಾತನಾಡಿದರು. ಕಡಬ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಹರಿಪ್ರಸಾದ್ ಎನ್ಕಾಜೆ ವೇದಿಕೆಯುಲ್ಲಿ ಉಪಸ್ಥಿತರಿದ್ದರು. ವಿವಿಧ ಪಕ್ಷಗಳಿಂದ ನೂಜಿಬಾಳ್ತಿಲ ಗ್ರಾಮದ ಜಾಲು ರಾಮಣ್ಣ ಗೌಡ, ತಿಮ್ಮಪ್ಪ ಗೌಡ ಬಾಂತಾಜೆ, ಭಾಸ್ಕರ ಗೌಡ ಮಾರಪ್ಪೆ, ಬಿಜು ಪಾಲೆತ್ತಡ್ಕ, ಮೊದಲಾದವರು ಪಕ್ಷಕ್ಕೆ ಸೇರ್ಪಡೆಗೊಂಡರು. ನೂಜಿಬಾಳ್ತಿಲ ಗ್ರಾಮ ಸಮಿತಿ ಅಧ್ಯಕ್ಷರನ್ನಾಗಿ ರಾಮಣ್ಣ ಗೌಡ ಜಾಲು ನೇಮಿಸಿದರೆ ರೆಂಜಿಲಾಡಿ ಗ್ರಾಮ ಸಮಿತಿ ಅಧ್ಯಕ್ಷರನ್ನಾಗಿ ಜನಾರ್ಧನ ಗೌಡ ಪಾಡ್ಲರನ್ನು ಆಯ್ಕೆಮಾಡಲಾಯಿತು. ಪಕ್ಷದ ಪ್ರಮುಖರಾದ ಉದಯಶಂಕರ್ ಕುಬಲಾಡಿ, ಸುಂದರ ಗೌಡ ಬಳ್ಳೇರಿ, ಕೇಶವ ಡೆಪ್ಪಾಜೆ, ವಿಶ್ವನಾಥ ರೈ ಐಲ, ಯುವಮುಂದಾಳು ಸುಶಾಂತ್ ರೈ, ಮೊದಲಾದವರು ಉಪಸ್ಥಿತರಿದ್ದರು. ಜೆಡಿಎಸ್ ಕಾರ್ಯದರ್ಶಿ ಸನು ಕಲ್ಲುಗುಡ್ಡೆ ಸ್ವಾಗತಿಸಿ, ಇ.ಜಿ ಜೋಸೆಫ್ ವಂದಿಸಿದರು.

error: Content is protected !!

Join the Group

Join WhatsApp Group