ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥ ನಿರ್ಮಾಣ ➤ ಇದು ಮಲೆಕುಡಿಯರಿಗೆ ಒಲಿದ ಕಲೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.16: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಪಾರಂಪರಿಕ ಮತ್ತು ಜನಪದೀಯ ಶೈಲಿಯಲ್ಲಿ ರಚಿಸಲಾಗುವ ರಥ ಮತ್ತು ಅಲಂಕಾರಿಕ ಕೆಲಸಗಳಿಗೆ, ಮಾರ್ಗಶಿರ ಶುದ್ಧ ಪೌರ್ಣಮಿಯಂದು ಸಹಸ್ರ ನಾಮಾರ್ಚನೆ ಬಳಿಕ ದೇಗುಲದ ಪ್ರಧಾನ ಅರ್ಚಕರು ಚಾಲನೆ ನೀಡುತ್ತಾರೆ. ರಥ ಮುಹೂರ್ತದ ಬಳಿಕ ಮಲೆಕುಡಿಯರು ವೀಳ್ಯ ಸ್ವೀಕರಿಸಿ ಕಾಡಿಗೆ ತೆರಳುತ್ತಾರೆ. ರಥ ನಿರ್ಮಾಣಕ್ಕೆ ಬೇಕಿರುವ ಬೆತ್ತಗಳನ್ನು ಸಂಗ್ರಹಿಸಿ, ಬ್ರಹ್ಮರಥ ಕಟ್ಟಲು ಆರಂಭಿಸುತ್ತಾರೆ. ನಾಡಿನ ಇತರ ದೇವಸ್ಥಾನಗಳಲ್ಲಿ ರಥವನ್ನು ಹಗ್ಗಗಳಿಂದ ರಚಿಸಿದರೆ, ಸುಬ್ರಹ್ಮಣ್ಯದಲ್ಲಿ ಮಾತ್ರ ಕೇವಲ ಬಿದಿರು, ಮರದ ಹಲಗೆ ಹಾಗೂ ಬೆತ್ತ ಬಳಸಿ ತೇರು ನಿರ್ಮಿಸುವುದು ವಿಶೇಷ.

 

ಕುಕ್ಕೆ ಕ್ಷೇತ್ರದ ಎಲ್ಲ ರೀತಿಯ ರಥಗಳನ್ನು ಬೆತ್ತಗಳಿಂದಲೇ ನೇಯ್ದು ಶೃಂಗರಿಸಲಾಗುತ್ತದೆ. ರಥವನ್ನು ನೇಯುವ ಕಲೆ ಮಲೆ ಕುಡಿಯ ಸಮುದಾಯಕ್ಕೆ ಒಲಿದ ಕಲೆ. ರಥ ನಿರ್ಮಾಣಕ್ಕೆ ಬೇಕಾದ ರೀತಿಯ ಬೆತ್ತಗಳನ್ನು ಕಾಡಿನಿಂದ ಕಡಿದು ತಂದು ಬೇಕಾದ ರೀತಿಯಲ್ಲಿ ಆಕರ್ಷಣೀಯ ರೀತಿಯಲ್ಲಿ ರಥವನ್ನು ಶೃಂಗಾರ ಮಾಡುತ್ತಾರೆ. ಸಾವಿರಾರು ವರುಷಗಳಿಂದ ಈ ಪುಣ್ಯದ ಕೆಲಸವನ್ನು ಕೇವಲ ಮಲೆ ಕುಡಿಯ ಜನಾಂಗದವರು ಮಾತ್ರ ಮಾಡಿಕೊಂಡು ಬರುತ್ತಿದ್ದಾರೆ. ಹಗ್ಗ ಬಳಸದೆ, ಗಂಟು ಬಿಗಿಯದೆ ರಥ ನಿರ್ಮಾಣ ಮಾಡಲಾಗುತ್ತದೆ. ಕಾಡುಗಳಿಂದ ಸಂಗ್ರಹಿಸಿದ ಬೆತ್ತ ಬಳಸಿ, ಹಗ್ಗ ಬಳಸದೆ ಬೆತ್ತದಿಂದ ತೇರನ್ನು ರಚಿಸುವುದು ಮೂಲನಿವಾಸಿಗಳಿಗೆ ಕರಗತವಾದ ವಿಶೇಷ ಕಲೆ.

 

 

ಈ ಮೂಲಕ ಸುಮಾರು 50 ಮಂದಿ ಮಲೆಕುಡಿಯರು ಕಾಡಿಗೆ ತೆರಳಿ ಬ್ರಹ್ಮರಥ ನಿರ್ಮಾಣಕ್ಕೆ ಬೇಕಾದ ಬೆತ್ತದ ಸಾಮಾಗ್ರಿಗಳನ್ನು ತರುತ್ತಾರೆ. ಈ ಪವಿತ್ರವಾದ ಕಾರ್ಯದ ಸಂದರ್ಭದಲ್ಲಿ ಮಡಿಯಿಂದ ಇದ್ದು ರಥ ನಿರ್ಮಾಣದ ಕೈಂಕರ್ಯದಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡು ದೇವರ ಸೇವೆಯಲ್ಲಿ ಭಾಗಿಯಾಗಿರುತ್ತಾರೆ.

error: Content is protected !!

Join the Group

Join WhatsApp Group