ಕಟ್ಟಡ ನೆಲಸಮ ಪ್ರಕರಣ, ಕಂಗನಾಗೆ ಗೆಲುವು ➤ ಬಿಎಂಸಿಗೆ ಹೈಕೋರ್ಟ್‌ ಚಾಟಿ, ವಿಲನ್‌ಗಳಿಗೆ ಕಂಗನಾ ಧನ್ಯವಾದ

(ನ್ಯೂಸ್ ಕಡಬ) newskadaba.com ಮುಂಬೈ ನ. 27: ಬೃಹನ್‌ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ವಿರುದ್ಧದ ಕಾನೂನು ಹೋರಾಟದಲ್ಲಿ ಬಾಂಬೆ ಹೈಕೋರ್ಟ್‌ ನಟಿ ಕಂಗನಾ ರಾಣಾವತ್‌ ಪರವಾಗಿ ತೀರ್ಪು ನೀಡಿದ್ದು ಮಹಾರಾಷ್ಟ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕಂಗನಾ ರಣಾವತ್‌ ಅವರ ಕಟ್ಟಡವನ್ನು ಒಡೆದಿರುವ ಬಿಎಂಸಿ ಕ್ರಮ ದುರುದ್ದೇಶದಿಂದ ಕೂಡಿದೆ ಎಂದು ಹೇಳಿದ ಕೋರ್ಟ್‌ ಕಂಗನಾ ಸರ್ಕಾರದಿಂದ ಪರಿಹಾರ ಪಡೆಯಲು ಅರ್ಹರು ಎಂದು ಹೇಳಿದೆ. ನ್ಯಾ.ಎಸ್.ಜೆ.ಕಾತಾವಾಲ ಮತ್ತು ಆರ್.ಐ.ಚಾಗ್ಲಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ವ್ಯಕ್ತಿಯ ವಿರುದ್ಧ ಅಧಿಕಾರಿಗಳು ತೋಳ್ಬಲವನ್ನು ಪ್ರದರ್ಶಿಸುವುದನ್ನು ಒಪ್ಪಲಾಗದು. ಇದು ಕಾನೂನಿನ ದುರುಪಯೋಗ ಅಲ್ಲದೇ ಬೇರೇ ಏನೂ ಅಲ್ಲ ಎಂದು ಅಭಿಪ್ರಾಯಪಟ್ಟು ಬಿಎಂಸಿಗೆ ಚಾಟಿ ಬೀಸಿದೆ.

ಅರ್ಜಿಯಲ್ಲಿ ಕಂಗನಾ 2 ಕೋಟಿ ರೂ.ಪರಿಹಾರ ಕೇಳಿದ ವಿಚಾರಕ್ಕೆ ಕೋರ್ಟ್‌, ಈ ಸಂಬಂಧವಾಗಿ ಕೋರ್ಟ್‌ ಓಬ್ಬರು ಮೌಲ್ಯಮಾಪಕರನ್ನು ನೇಮಿಸುತ್ತದೆ. ಇವರು ಕಟ್ಟಡಕ್ಕೆ ಆಗಿರುವ ಹಾನಿಯನ್ನು ಅಂದಾಜಿಸಿ 2021ರ ಮಾರ್ಚ್‌ ಒಳಗಡೆ ಸೂಕ್ತ ಆದೇಶವನ್ನು ಹೊರಡಿಸಬೇಕು ಎಂದು ಸೂಚಿಸಿದೆ. ತನ್ನ ಆದೇಶದಲ್ಲಿ ಕೋರ್ಟ್‌ ಅರ್ಜಿದಾರರು ಸರ್ಕಾರದ ಬಗ್ಗೆಅಭಿಪ್ರಾಯಗಳನ್ನು ಹೇಳುವಾಗ ಸಂಯಮವನ್ನು ತೋರಿಸಬೇಕು ಎಂದು ಹೇಳಿದೆ. ಕೋರ್ಟ್‌ ಆದೇಶಕ್ಕೆ ಪ್ರತಿಕ್ರಿಯಿಸಿದ ಕಂಗನಾ ಸತ್ಯಕ್ಕೆ ಜಯವಾಗಿದೆ. ಈ ಹೋರಾಟದಲ್ಲಿ ನನಗೆ ಧೈರ್ಯ ತುಂಬಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು. ತೀರ್ಪು ಬರಲು ಕಾರಣರಾದ ʼವಿಲನ್‌ʼಗಳಿಗೂ ಧನ್ಯವಾದ ಎಂದು ಹೇಳಿದ್ದಾರೆ.

 

error: Content is protected !!

Join the Group

Join WhatsApp Group