ನೂಜಿಬಾಳ್ತಿಲ: ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com ಕಡಬ,ಅ.6. ನೂಜಿಬಾಳ್ತಿಲ ಬೆಥನಿ ಸಂ.ಪ.ಪೂ.ಕಾಲೇಜಿನಲ್ಲಿ ಸೆ.25ರಿಂದ ಅ.5ರ ತನಕ ನಡೆದ ಕಡಬ ಸ.ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಗುರುವಾರ ನಡೆಯಿತು.

ಸಮಾರೋಪ ಸಮಾರಂಭವನ್ನು ಬೆಥನಿ ಸಂ.ಪ.ಪೂ.ಕಾಲೇಜಿನ ನಿರ್ದೇಶಕ ರೆ|ಫಾ|ಫರ್ಡಿನಾಂಡ್ರವರು ಉದ್ಘಾಟಿಸಿ, ವಿದ್ಯಾರ್ಥಿ ಜೀವನದಲ್ಲಿ ಗುರುಹಿರಿಯರಿಗೆ ಗೌರವ, ಸೇವಾ ಮನೋಭಾವದಿಂದ ಸಮಾಜಮುಖಿಯಾಗಿ ಕೆಲಸ ಮಾಡಿದಲ್ಲಿ ಮುಂದಿನ ಜೀವನ ಯಶಸ್ಸು ಲಭಿಸಲಿದೆ. ಇಂತಹ ಸೇವಾ ಶಿಬಿರಗಳ ಮೂಲಕ ಹತ್ತಾರು ಮನೆಗಳ ವಿದ್ಯಾರ್ಥಿಗಳು ಒಂದಾಗಿ, ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿ, ಸಹನೆ, ಶಾಂತಿ, ಸಹಬಾಳ್ವೆಯಿಂದ ಬೆರೆತು ಸತ್ಕಾರ್ಯಗಳನ್ನು ಮಾಡುವುದರೊಂದಿಗೆ ಮುಂದೆ ಸತ್ಪ್ರಜೆಗಳಾಗಿ ಸಮಾಜಕ್ಕೆ ಮಾದರಿ ವಿದ್ಯಾರ್ಥಿಗಳಾಗಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಮಾತನಾಡಿ, ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಎನ್ಎಸ್ಎಸ್ ಕ್ಯಾಂಪ್ನಂತಹ ಶಿಬಿರಗಳು ಅನಿವಾರ್ಯವಾಗಿದೆ. ಇಲ್ಲಿನ ಶಿಬಿರವು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ದಾರಿದೀಪವಾಗಲಿ ಎಂದರು.

ಬೆಥನಿ ಪ.ಪೂ.ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಸಂತ ಗೌಡ ಮಾರಪ್ಪೆ, ಬೆಥನಿ ಪೌಢಶಾಲೆಯ ಮುಖ್ಯಗುರು ತೋಮಸ್ ಎ.ಕೆ, ಸಂಸ್ಥೆಯ ಪ್ರಾಚಾರ್ಯ ಜಾರ್ಜ್ ಟಿ.ಎಸ್, ಕಡಬ ಪ.ಪೂ.ಕಾಲೇಜಿನ ಉಪನ್ಯಾಸಕರಾದ ಹರಿಶಂಕರ್, ಸುಖೇಶ್ ಚಂದ್ರಶೇಖರ್, ಉಪನ್ಯಾಸಕಿ ಸೀಮಾ, ಮರ್ದಾಳ ವಿಜಿತ್ ಸೌಂಡ್ಸ್‌ನ ಮಾಲಕ ವಿಜಿತ್ ರೈ ಮಾತನಾಡಿ ಶುಭಹಾರೈಸಿದರು. ಬೆಥನಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಚೆರಿಯನ್ ಬೇಬಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರ ಸಂಯೋಜಕ ಕಡಬ ಪ.ಪೂ.ಕಾಲೇಜಿನ ಉಪನ್ಯಾಸಕ ಸಲೀನ್ ಕೆ.ಪಿ ವರದಿ ವಾಚಿಸಿ, 7 ದಿನಗಳಿಂದ ಶಿಬಿರ ನಡೆಸಲು ಸಹಕರಿಸಿದ ಬೆಥನಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಶಿಬಿರಾಧಿಕಾರಿ ಉಪನ್ಯಾಸಕ ವಾಸುದೇವ ಗೌಡ ಕೋಲ್ಪೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಲಾವಣ್ಯ ವಂದಿಸಿದರು.

error: Content is protected !!

Join the Group

Join WhatsApp Group