ಮರ್ದಾಳ ಮೀನು ಮಾರುಕಟ್ಟೆಯಲ್ಲಿ ಮಾತಿನ ಚಕಮಕಿ ► ಮೀನು ರಸ್ತೆಗೆ ಎಸೆದು ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ,ಅ.6. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಮೀನು ಮಾರಾಟಗಾರರ ನಡುವೆ ಮಾತಿನ ಚಕಮಕಿ ನಡೆದು, ಮೀನನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮರ್ದಾಳ ಮೀನುಮಾರುಕಟ್ಟೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಮರ್ದಾಳ ಗ್ರಾ.ಪಂ.ಗೆ ಒಳಪಟ್ಟ ಮರ್ದಾಳ ಪೇಟೆಯಲ್ಲಿರುವ ಮೀನು ಮಾರುಕಟ್ಟೆಯ ಎರಡು ಸ್ಟಾಲ್ ಗಳ ಪೈಕಿ ಒಂದನ್ನು 1ವರ್ಷದ ಅವಧಿಗೆ ಕರ್ಮಾಯಿ ತುಂಬ್ಯ ನಿವಾಸಿ ಅಬ್ದುಲ್ ಖಾದರ್ರವರು ರೂ.30,500ಕ್ಕೆ ಹಾಗೂ ಇನ್ನೊಂದು ಸ್ಟಾಲ್ ನ್ನು ಕಡಬ ಹಳೆಸ್ಟೇಷನ್ ನಿವಾಸಿ ರಮ್ಲಾರವರು 31,500ಕ್ಕೆ ಏಲಂನಲ್ಲಿ ಪಡೆದುಕೊಂಡಿದ್ದರು.

ಬಳಿಕ ರಮ್ಲಾರವರು ತಾವು ಪಡೆದುಕೊಂಡಿದ್ದ ಸ್ಟಾಲ್ ಅನ್ನು ಅಬ್ದುಲ್ ಖಾದರ್ಗೆ ನೀಡುವ ಬಗ್ಗೆ ಇವರೊಳಗೆ ಅಲಿಖಿತ ಒಪ್ಪಂದವೂ ನಡೆದಿತ್ತು. ಆದರೆ ಏಲಂನಲ್ಲಿ ಪಡೆದುಕೊಂಡ ಹಣಕ್ಕಿಂತ ಹೆಚ್ಚಿನ ಮೊತ್ತ ನೀಡುವಂತೆ ರಮ್ಲಾರವರು ಬೇಡಿಕೆ ನೀಡಿದ್ದು ಇದಕ್ಕೆ ಅಬ್ದುಲ್ ಖಾದರ್ರವರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ರಮ್ಲಾರವರು ಉಪ್ಪಿನಂಗಡಿಯ ಮೀನು ಮಾರಾಟಗಾರೊಬ್ಬರಿಗೆ ಸ್ಟಾಲ್ ನೀಡಿದ್ದರು ಎನ್ನಲಾಗಿದೆ. ಇವರು ಏ.5ರಂದು ಈ ಸ್ಟಾಲ್ನಲ್ಲಿ ಮೀನು ಮಾರಾಟ ಆರಂಭಿಸಿದ್ದು, ಈ ವೇಳೆ ಇವರೊಳಗೆ ಮಾತಿನ ಚಕಮಕಿ ನಡೆದಿದ್ದು ಮೀನನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಬಳಿಕ ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಇಬ್ಬರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

error: Content is protected !!

Join the Group

Join WhatsApp Group