➤➤ ಆರೋಗ್ಯ ಮಾಹಿತಿ ನವೆಂಬರ್- 17 ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ ✍? ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com  ನ. 17. ಪ್ರತಿ ವರ್ಷ ನವೆಂಬರ್ 17 ರಂದು ನಮ್ಮ ಭಾರತ ದೇಶದಲ್ಲಿ ಅಪಸ್ಮಾರ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಅಪಸ್ಮಾರ ದಿನ ಎಂದು ಆಚರಿಸಿ, ರೋಗದ ಬಗ್ಗೆ ಇರುವ  ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕುವ  ಕಾರ್ಯವನ್ನು ‘ರಾಷ್ಟ್ರೀಯ ಅಪಸ್ಮಾರ ಸಂಸ್ಥೆ’ ನಡೆಸುತ್ತಿದೆ. ನವೆಂಬರ್ ತಿಂಗಳನ್ನು ಅಪಸ್ಮಾರ ಜಾಗೃತಿ ತಿಂಗಳು ಎಂದೂ ಆಚರಿಸಲಾಗುತ್ತದೆ. ಆದರೆ ಅಂತಾರಾಷ್ಟ್ರೀಯ  ಮಟ್ಟದಲ್ಲಿ ಮಾರ್ಚ್ 26 ರಂದು ‘ಪರ್ಪಲ್ ದಿನ ಎಂದು ಆಚರಿಸಿ ಅಪಸ್ಮಾರದ ಬಗ್ಗೆ ಜಾಗೃತಿಯನ್ನು ವಿಶ್ವದಾದ್ಯಂತ  ಮಾಡಲಾಗುತ್ತಿದೆ. ಇವೆರಡೂ ಆಚರಣೆಯ ಮೂಲ ಉದ್ದೇಶ ಒಂದೇ ಆಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜನರಲ್ಲಿ ಈ ರೋಗದ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳು ಮತ್ತು ಕಪೋಲಕಲ್ಪಿತ ಕಥೆಗಳು ಚಾಲ್ತಿಯಲ್ಲಿದೆ. ಬೆಳೆಯುತ್ತಿರುವ ದೇಶಗಳಲ್ಲಿ ಅಜ್ಞಾನ, ಅನಕ್ಷರತೆ ಮತ್ತು ಬಡತನದ ಕಾರಣದಿಂದ ಈ ರೋಗಕ್ಕೆ ಬಹಳಷ್ಟು ಅಪವಾದ ಅಂಟಿಕೊಂಡಿದೆ. ಈ ಅಪಸ್ಮಾರ ಎನ್ನುವುದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಸರಿ ಸುಮಾರು 50 ಮಿಲಿಯನ್ ಮಂದಿ ವಾರ್ಷಿಕವಾಗಿ ಈ ರೋಗದಿಂದ  ಬಳಲುತ್ತಿದ್ದಾರೆ.  ಇದರಲ್ಲಿ ಸಿಂಹಪಾಲು ಬೆಳೆಯುತ್ತಿರುವ ರಾಷ್ಟ್ರಗಳಿಗೆ ಸಲ್ಲುತ್ತದೆ. 80 ಶೇಕಡಾ ಮಂದಿ ಈ ದೇಶಗಳಲ್ಲಿ ಕಂಡು ಬರುತ್ತಿದೆ. ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ ಅಪಸ್ಮಾರ ಬರದಂತೆ ಅಥವಾ ಅಪಸ್ಮಾರದ ತೀವ್ರತೆಯನ್ನು ಖಂಡಿತವಾಗಿಯೂ ಕಡಿಮೆ ಮಾಡುವ ಔಷಧಿಗಳು ಲಭ್ಯವಿದೆ. ನಿಯಮಿತವಾಗಿ ವೈದ್ಯರ ಸಲಹೆಯಂತೆ  ಔಷಧಿ ಸೇವಿಸಿದಲ್ಲಿ ಅಪಸ್ಮಾರ ರೋಗಿಗಳು ಇತರರಂತೆ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವಿದೆ.

ಏನಿದು ಅಪಸ್ಮಾರ ಖಾಯಿಲೆ?

ಅಪಸ್ಮಾರ ಎಂದರೆ ಪದೇ ಪದೇ ಮೆದುಳಿನ ನರಕೋಶಗಳು ಅತ್ಯಧಿಕ ಪ್ರಮಾಣದಲ್ಲಿ ಹೊರಹಾಕುವ ವಿದ್ಯುತ್ ಪ್ರಚೋದನೆಯ ಫಲವಾಗಿ ಮೆದುಳಿನ ಕಾರ್ಯದಲ್ಲಿ ಉಂಟಾಗುವ ತಾತ್ಕಲಿಕ ನಿಲುಗಡೆ ಅಥವಾ ವ್ಯತ್ಯಯದ ಪರಿಣಾಮವಾಗಿ ಆ ವ್ಯಕ್ತಿ ಅನುಭವಿಸುವ ಸ್ಮೃತಿ ಸೆಳೆತ ಮತ್ತು ಸೆಳೆವು. ಇದನ್ನೇ ಮೂರ್ಛೆ ರೋಗ, ಪಿಟ್ಸ್, ಅಪಸ್ಮಾರ, ಮಲರೋಗ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಎಪಿಲೆಪ್ಸಿ(EPILEPSY) ಎಂದು ಕರೆಯುತ್ತಾರೆ. ಜನ ಸಾಮಾನ್ಯ ಆಡುಭಾಷೆಯಲ್ಲಿ ‘ಪಿಟ್ಸ್’ ಎನ್ನುತ್ತಾರೆ.

ನಮ್ಮ ಮೆದುಳು ಎನ್ನುವುದು ಒಂದು ಸಂಕೀರ್ಣವಾದ ನರಮಂಡಲ. ಅದರಲ್ಲಿ ನರಕೋಶಗಳ  ಮಧ್ಯೆ ವಿದ್ಯುತ್ ಪ್ರಸರಣ ನಿಯಮಿತವಾಗಿ ನಡೆಯುತ್ತಿರುತ್ತದೆ. ವಿದ್ಯುತ್ ಆ ವೇಗಗಳ ಹರಡುವಿಕೆ ಅತೀ ಚಿಕ್ಕ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ಆದರೆ ದೊಡ್ಡ ಸೆಳವು ಬಂದಾಗ ನರಕೋಶಗಳ (ಓeuಡಿoಟಿs) ದೊಡ್ಡ ಗುಂಪು ಪದೇ ಪದೇ ಸೆಳತಕೊಳ್ಳಗಾಗಿ ಅವೇಶಗೊಂಡು, ಚುರುಕುಗೊಂಡು ತುಂಬಾ ವ್ಯಾಪಕ ಪ್ರಮಾಣದಲ್ಲಿ ವಿದ್ಯುತ್ ಚೇತನವನ್ನು ಹೊರಹಾಕುತ್ತದೆ. ಅದನ್ನು ತಡೆಯುವ ಶಕ್ತಿ ನರಕೋಶಗಳ ಮದ್ಯೆ ಕುಗ್ಗಿ ಹೋಗಿರುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಸೆಳವಿನ ಕಾರ್ಯ ವ್ಯಾಪ್ತಿಗೊಂದು ಮಿತಿಯಿರುತ್ತದೆ. ಅಪಸ್ಮಾರ ರೋಗಿಗಳಲ್ಲಿ ಈ ಮಿತಿ ತುಂಬ ತಳಹಂತದಲ್ಲಿದ್ದು, ಅವರು ಬೇರೆ ಬೇರೆ ಕಾರಣದಿಂದಾಗಿ ದೊರೆಯುವ ಅನೇಕ ಬಗೆಯ ಪ್ರಚೋದನೆಗಳಿಗೆ ಸೆಳವನ್ನು ತೋರ್ಪಡಿಸುತ್ತಾರೆ. ಅಸಹಜವಾಗಿರುವ ಅವರ ನರಮಂಡಲದ ನರಕೋಶಗಳು, ಬಹಳ ಬೇಗನೆ ಪ್ರಚೋದನೆಗೊಳಗಾಗುತ್ತದೆ. ಅಪಸ್ಮಾರದ ಸೆಳವಿನ ಕಾರ್ಯಬಾಹುಳ್ಯ ಮೆದುಳಿನ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿರಬಹುದು. ಅಥವಾ ಅದು ವ್ಯಾಪಕವಾಗಿ ಹರಡಿ ಮೆದುಳಿನ ಎರಡು ಗೋಳಗಳಿಗೆ ವ್ಯಾಪಿಸಿಗೊಂಡು ಅತಿಯಾದ ಮಾರಕವಾದ, ವಿಪರೀತ ಸೆಳವನ್ನು ತೋರ್ಪಡಿಸಬಹುದು. ಮೆದುಳಿನ ನರಕೋಶಗಳ ಈ ಚಟುವಟಿಕೆಗಳನ್ನು ಮೆದುಳಿನ ವಿದ್ಯುತ್‍  ಮಾಪನ (ಇಇಉ)ದಲ್ಲಿ ನಿಖರವಾಗಿ ದಾಖಲಿಸಬಹುದಾಗಿದೆ. ಅದೇ ರೀತಿ ನರಮಂಡಲದ ನರಕೋಶಗಳ ತುದಿಯಲ್ಲಿನ ಚಿಕ್ಕ ಚಿಕ್ಕ ಕೋಣೆಗಳಲ್ಲಿ ನರಕೋಶಗಳನ್ನು ಪ್ರಚೋದಿಸುವ ರಸವಾಹಕವಾದ ಅಸೆಟೈಲ್ ಕೋಲಿನ್ ಮತ್ತು ಪ್ರಚೋದನೆಯನ್ನು ಕಡಿಮೆಯಾಗಿಸುವ ಗಾಮಾ ಅಮಿನೋ ಬ್ಯುಟರಿಕ್ ಆಸಿಡ್(ಇಂಃಂ)ಎಂಬ ರಸವಾಹಕಗಳಲ್ಲಿ ಸಾಮಾನ್ಯವಾಗಿ ಸಮತೋಲನವಿರುತ್ತದೆ. ಆದರೆ ಅಪಸ್ಮಾರವಿರುವ ರೋಗಿಗಳಲ್ಲಿ ಈ ಸಮತೋಲನ ಕಂಡು ಬರುವುದಿಲ್ಲ ಮತ್ತು ಅದೇ ಕಾರಣಕ್ಕಾಗಿ ವ್ಯಕ್ತಿ, ಪದೇ ಪದೇ ನರಮಂಡಲದ ನರಕೋಶಗಳ ವಿಪರೀತ ಸೆಳೆತಕೊಳ್ಳಗಾಗಿ ಅಪಸ್ಮಾರಕ್ಕೆ ತುತ್ತಾಗುತ್ತಾರೆ.

Also Read  ಬಿಳಿಮುಟ್ಟಿನ ಸಮಸ್ಯೆಯೇ.. -ಇಲ್ಲಿದೆ ಪರಿಹಾರ

ಅಪಸ್ಮಾರ ಉಂಟಾಗಲು ಕಾರಣಗಳೇನು?

  1. ಅನುವಂಶಿಕ ಕಾರಣಗಳು.
  2. ಹೆರಿಗೆಯ ಸಮಯದಲ್ಲಿ ಉಂಟಾಗುವ ಮೆದುಳಿಗೆ ಆಗುವ ಹಾನಿಯಿಂದಾಗಿ, ಅಪಸ್ಮಾರ ಖಾಯಿಲೆ ಬರಬಹುದು. ಇದು ಹೆರಿಗೆಯ ಸಮಯದಲ್ಲಿ ಮಗುವಿನ ತಲೆಯನ್ನು ಹೊರತೆಗೆಯುವ ಇಕ್ಕುಳದ ಒತ್ತಡದಿಂದಾಗಿ ಮೆದುಳಿಗೆ ಆಗುವ ಹಾನಿ ಅಥವಾ ಗರ್ಭಾಶಯದಲ್ಲಿರುವಾಗಲೇ ಉಂಟಾಗುವ ಅಮ್ಲಜನಕದ ಕೊರತೆಯಿಂದಾಗಿಯೂ, ಬಾಲ್ಯದಲ್ಲಿ ಅಪಸ್ಮಾರ ಬರುವ ಸಾಧ್ಯತೆ ಇದೆ.
  3. ಬಾಲ್ಯದಲ್ಲಿ ತಲೆಗೆ ಬಿದ್ದ ಪೆಟ್ಟು ನಂತರದ ದಿನಗಳಲ್ಲಿ ಅಥವಾ ಅನೇಕ ತಿಂಗಳು ಅಥವಾ ವರ್ಷಗಳ ಬಳಿಕ ಸೆಳವಿನ ರೂಪದಲ್ಲಿ ಕಾಣಿಸಿಕೊಳ್ಳಬಹುದು.
  4. ವಿಪರೀತವಾದ ಜ್ವರದಿಂದಲೂ ಕೆಲವೊಮ್ಮೆ ಅಪಸ್ಮಾರ ಬರುವ ಸಾಧ್ಯತೆ ಇದೆ.
  5. ಕೆಲವೊಂದು ಮೆದುಳಿನ ಶಸ್ತ್ರ ಚಿಕ್ಸಿತೆಯ ಬಳಿಕ, ಮೆದುಳಿಗೆ ಉಂಟಾದ ಗಾಯದಿಂದಾಗಿ ಅಪಸ್ಮಾರ ಬರಬಹುದು.
  6. ಮೆದುಳಿಗೆ ರಕ್ತ ಸಂಚಾರ ಅಥವಾ ಆಮ್ಲಜನಕ ಕೊರತೆ ಉಂಟಾದಾಗ ಕೂಡಾ ಅಪಸ್ಮಾರ ಬರಬಹುದು. ನಮ್ಮ ಹೃದಯದಿಂದ ಹೊರಹಾಕುವ ರಕ್ತದಲ್ಲಿ 50 ಶೇಕಡಾ ಪ್ರಮಾಣ, ಮೆದುಳಿಗೆ ಸರಬರಾಜಾಗುತ್ತದೆ. ಸಾಮಾನ್ಯವಾಗಿ ವ್ಯಕ್ತಿಯ ಮೆದುಳು 1ರಿಂದ 1.5 ಕೆಜಿ ತೂಕ ಹೊಂದಿರುತ್ತದೆ ಮತ್ತು ಪ್ರತಿ 100 ಗ್ರಾಮ್ ಮೆದುಳಿಗೆ ಕನಿಷ್ಠ 30ಒಐ ರಕ್ತದ ಅವಶ್ಯಕತೆ ಪ್ರತಿ ನಿಮಿಷಕ್ಕೆ ಇರುತ್ತದೆ. ಮೂರು ನಿಮಿಷಕ್ಕಿಂತ ಜಾಸ್ತಿ ಮೆದುಳಿಗೆ ರಕ್ತ ಸಂಚಾರ ವ್ಯತ್ಯಯವಾದಲ್ಲಿ, ಶಾಶ್ವತವಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯಾಗಬಹುದು. ಒಟ್ಟಿನಲ್ಲಿ ಮೆದುಳು ನಮ್ಮ ದೇಹದ ಅತ್ಯಂತ ಕ್ರೀಯಾಶೀಲವಾದ ಅಂಗವಾಗಿದ್ದು ಆಮ್ಲಜನಕದ ಕೊರತೆಯಿಂದ, ಬಹಳ ಬೇಗ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ರಕ್ತದ ಕೊರತೆ ಕಾಣಿಸಿದ ಕೂಡಲೇ ಅಪಸ್ಮಾರದ ರೂಪದಲ್ಲಿ ಮೆದುಳು ತನ್ನ ಅಕ್ರೋಶ ಮತ್ತು ಅಸಹಕಾರವನ್ನು ಹೊರಹಾಕುತ್ತದೆ ಎಂದರೂ ತಪ್ಪಲ್ಲ.
  7. ಅತಿಯಾದ ಮದ್ಯಪಾನ, ಅತಿಯಾದ ಔಷಧಿ ಸೇವನೆ, ಖಿನ್ನತೆ ಹೋಗಲಾಡಿಸುವ ಔಷಧಿಗಳ ದುರ್ಬಳಕೆ ಕೂಡಾ ಅಪಸ್ಮಾರಕ್ಕೆ ಕಾರಣವಾಗಬಹುದು. ನಿಯಮಿತವಾಗಿ ನಿರಂತರವಾಗಿ, ಮದ್ಯಪಾನ ಮಾಡುವ ಮದ್ಯ ವ್ಯಸನಿಗಳು ಮದ್ಯಪಾನವನ್ನು ಏಕಾಏಕಿ ಬಿಟ್ಟಾಗ ಕೂಡಾ ವ್ಯಕ್ತಿಯಲ್ಲಿ ಅಪಸ್ಮಾರ ಗೋಚರಿಸಬಹುದು. ಅದೇ ರೀತಿ ನಿದ್ರಾಹೀನತೆಗೆ ಉಪಯೋಗಿಸುವ ಗಾರ್ಡಿನಾಲ್ ಸೋಡಿಯಂ ಎಂಬ ಫಿನೋಬಾರ್ಬಿಟೋನ್ ಅಥವಾ ಬೆನ್ಜೊಡಯಜಪಿನ್ ಔಷಧಿ ಸೇವನೆ ನಿಲ್ಲಿಸಿದಾಗಲೂ ಅಪಸ್ಮಾರ ಕಾಣಿಸಿಕೊಳ್ಳಬಹುದು.
  8. ಮೆದುಳಿನ ಉರಿಯೂತ (ಒeಟಿiಟಿgiಣis) ಮೆದುಳಿನ ಪೊರೆ ಉರಿಯೂತ, ಮೆದುಳಿನ ಕೀವುಗಳು, ಮೆದುಳಿನ ಹೊರಮೈಯಲ್ಲಿನ ಪೊರೆಯಲ್ಲಿ ರಕ್ತ ಶೇಖರಣೆ (Sub ಆuಡಿಚಿಟ ಊemಚಿಣomಚಿ), ಮೆದುಳಿಗೆ ಗಾಯವಾಗಿ ಊದಿಕೊಂಡಾಗ, (ಅಪಘಾತಗಳಲ್ಲಿ) ಮೆದುಳಿನ ಒಳಗಿನ ಒತ್ತಡ ಜಾಸ್ತಿಯಾದಾಗ ಅಪಸ್ಮಾರ ಕಾಣಿಸಿಕೊಳ್ಳಬಹುದು.
  9. ರಕ್ತದಲ್ಲಿ ಗ್ಲುಕೋಸ್, ಕ್ಯಾಲ್ಸಿಯಂ, ಸೋಡಿಯಂ ಪ್ರಮಾಣ ಕಡಿಮೆಯಾದಾಗ ರಕ್ತದಲ್ಲಿ ಕಲ್ಮಶಗಳು  ಜಾಸ್ತಿಯಾದಾಗ ಯೂರಿಯಾ, ಯೂರಿಕ್  ಆಸಿಡ್ ಮುಂತಾದ ಕಲ್ಮಶಗಳು, ಕಿಡ್ನಿ ವೈಫಲ್ಯದಿಂದಾಗಿ ರಕ್ತದಲ್ಲಿ ಏರಿಕೆಯಾಗಿ, ಅಪಸ್ಮಾರ ಕಾಣಿಸಬಹುದು.
  10. ಲಿವರ್ (ಯಕೃತ್ತು) ವಿಪರೀತ ಮದ್ಯ ಸೇವನೆಯಿಂದಾಗಿ ನಾಶಗೊಂಡು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡಾಗ ರಕ್ತದಲ್ಲಿ ಕಲ್ಮಶಗಳು ಅಥವಾ ಔಷಧಗಳ ಶೇಖರಣೆಗೊಂಡು ಅಪಸ್ಮಾರ ಉಂಟಾಗುವ ಸಾದ್ಯತೆ ಇರುತ್ತದೆ.

ಅಪಸ್ಮಾರ ಬಂದಾಗ ಏನು ಮಾಡಬೇಕು?

ಅಪಸ್ಮಾರ ಬಂದಾಗ ತಕ್ಷಣ ಮಾಡಬೇಕಾದ ತುರ್ತು ಕೆಲಸವೆಂದರೆ, ರೋಗಿಯ ದೇಹದ ಭಾಗಕ್ಕೆ ಯಾವುದೇ ರೀತಿಯ ಅಪಾಯ ಆಗದಂತೆ ಆತನನ್ನು ನೋಡಿಕೊಳ್ಳಬೇಕು. ಚೂಪಾದ  ವಸ್ತುಗಳು, ಕಲ್ಲು, ನೀರು, ಬೆಂಕಿ, ಇತ್ಯಾದಿಗಳಿಂದ ದೂರವಿರಿಸಬೇಕು. ಬಿಗಿಯಾದ ಉಡುಪನ್ನು ಸಡಿಲಿಸಬೇಕು. ಆತನು ಉಸಿರಾಡಲು ಅನುಕೂಲವಾಗುವಂತೆ, ಉಸಿರು ಸರಾಗವಾಗಿ ಚಲನೆ ಉಂಟಾಗಲು ಪೂರಕವಾಗುವಂತೆ ತಲೆಯನ್ನು ಒಂದು ಕಡೆ ವಾಲಿಸಿ ಹಿಡಿಯಬೇಕು. ನಾಲಗೆ ಕಚ್ಚಿಕೊಳ್ಳದಂತೆ ತಡೆಯಲು, ಹಲ್ಲುಗಳ ನಡುವೆ ಕರವಸ್ತ್ರ ಅಥವಾ ಬಟ್ಟೆಯನ್ನು ಇಡಬಹುದು. ನಾಲಗೆ ಕಡಿಯದಂತೆ ತಡೆಯಲು  ಮರದ ತುಂಡು, ನಾಲಗೆ ಇಕ್ಕುಳ ಮತ್ತು ದೇಹದ ಚಲನೆ ನಿರ್ಬಂಧಿಸುವ ಸಾಧನಗಳಿಂದ, ಉಪಕಾರಕ್ಕಿಂತ ಹೆಚ್ಚು ಅಪಾಯವಾಗುವ ಸಾಧ್ಯತೆ ಇರುತ್ತದೆ. ಸೆಳವು ಕಾಲದಲ್ಲಿ ಸುರಿಯುವ ವಿಪರೀತ ಜೊಲ್ಲುರಸ, ಗಂಟಲಿಗೆ ಹೋಗಿ ಉಸಿರಾಟಕ್ಕೆ ತೊಂದರೆಯಾಗಬಹುದು. ನಿಯಮಿತವಾಗಿ ಒರೆಸಿ, ಗಾಳಿಯ ಸರಾಗ ಚಲನೆಗೆ ಅನುವು ಮಾಡಿಕೊಡಬೇಕು. ಎತ್ತರದ ಜಾಗದಲ್ಲಿ ವ್ಯಕ್ತಿ ಬಿದ್ದಿದ್ದರೆ, ವ್ಯಕ್ತಿಯನ್ನು ಸಮತಟ್ಟಾದ ನೆಲದಲ್ಲಿ ಮಲಗಿಸಿ ದೇಹಕ್ಕೆ ಯಾವುದೇ ಏಟಾಗದಂತೆ ತಡೆಯಬೇಕು. ಅಪಸ್ಮಾರದಿಂದ ಹೊರಳಾಡುತ್ತಿರುವ ವ್ಯಕ್ತಿಯ ಕೈಗೆ ಚೂಪಾದ ಕಬ್ಬಿಣದ ಸರಳನ್ನು ನೀಡಿ ಸೆಳತ ನಿಲ್ಲಿಸಲು ಪ್ರಯತ್ನಿಸುವುದು ಮೂರ್ಖತನದ ಪರಾಮಾವಧಿಯಾಗಿರುತ್ತದೆ. ಅದೇ ರೀತಿ ಮುಖದ ಮೇಲೆ ನೀರು ಸುರಿಯುವುದರಿಂದ  ಉಸಿರಾಟಕ್ಕೆ ಮತ್ತಷ್ಟು ತೊಂದರೆಯಾಗಬಹುದು. ಅಪಸ್ಮಾರದ ಬಂದು ವ್ಯಕ್ತಿ ಕಂಪಿಸುತ್ತಿರುವಾಗ ವ್ಯಕ್ತಿಯನ್ನು ಕುಳಿತುಕೊಳ್ಳಿಸುವುದಕ್ಕೆ ಪ್ರಯತ್ನಿಸಬಾರದು. ನೆಲದ ಮೇಲೆ ಮಲಗಿಸಿ ಅಪಸ್ಮಾರ ನಿಲ್ಲುವವರೆಗೆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಅಪಸ್ಮಾರದ ತೀವ್ರತೆ ಕಡಿಮೆಯಾದ ಬಳಿಕ ಆಸ್ಪತ್ರಗೆ ಸೇರಿಸಿ ಕೂಲಂಕುಷವಾಗಿ ಅಪಸ್ಮಾರಕ್ಕೆ ಕಾರಣವಾದ ಸ್ಥಿತಿ ಮತ್ತು ಕಾರಣಗಳನ್ನು ತಿಳಿದು ಚಿಕ್ಸಿತೆ ನೀಡಬೇಕಾಗುತ್ತದೆ.

Also Read  ಕುಟುಂಬ ಕಲಹಕ್ಕೆ ಬೇಡ ಚಿಂತೆ, ನೋಡಿರಿ ದಿನ ಭವಿಷ್ಯ.

ಅಪಸ್ಮಾರ ರೋಗಿಗಳು ಏನು ಮಾಡಬಾರದು?

ನಿರಂತರವಾಗಿ ಅಪಸ್ಮಾರ ರೋಗಕ್ಕೆ ತುತ್ತಾಗುವವರು, ವೈದ್ಯರ ಸೂಚನೆಯಂತೆ ನಿಯಮಿತವಾಗಿ ಔಷಧಿ ಸೇವಿಸಬೇಕು. ವೈದ್ಯರು ನೀಡಿದ ಮಾತ್ರೆಗಳನ್ನು ಅನೇಕ ವರ್ಷಗಳ ಕಾಲ ದಿನ ಬಿಡದೇ ಸೇವಿಸಬೇಕಾದ ಅನಿವಾರ್ಯತೆ ಇರುತ್ತದೆ. ಔಷಧಿ ಸೇವನೆ ನಿಲ್ಲಿಸಿದ ಕೂಡಲೇ ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಪಸ್ಮಾರದ ರೋಗದ ಚಿಕ್ಸಿತೆ ದೀರ್ಘಕಾಲಿಕವಾಗಿದ್ದು ವೈದ್ಯ, ರೋಗಿ ಮತ್ತು ರೋಗಿಯ ಕುಟುಂಬದ ಸದಸ್ಯರ ನಡುವೆ  ಹೊಂದಾಣಿಕೆ ಅತಿ ಅಗತ್ಯ. ಅಪಸ್ಮಾರ ರೋಗಿ ಒಬ್ಬರೇ ಈಜಾಡುವುದು, ಬೆಟ್ಟ ಹತ್ತುವುದು, ಗಾಡಿಚಾಲನೆ ಮಾಡುವುದು, ಚಲಿಸುವ ಯಂತ್ರಗಳೊಡನೆ ಒಡಾಡುವುದು, ಎತ್ತರ ಪ್ರದೇಶದಲ್ಲಿ ಕೆಲಸ ಮಾಡುವುದು, ಸಂಪೂರ್ಣವಾಗಿ ನಿಷಿದ್ಧವಾಗಿರುತ್ತದೆ. ಅಪಸ್ಮಾರ ರೋಗಿಗಳನ್ನು ಯಾವತ್ತೂ ಮನೆಯಲ್ಲಿ ಒಬ್ಬಂಟಿಯಾಗಿ ಬಿಡಬಾರದು. ಸ್ನಾನ ಗೃಹದಲ್ಲಿಯೂ ಬಾಗಿಲು ಚಿಲಕ ಹಾಕದೇ ಸ್ನಾನ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಒಟ್ಟಿನಲ್ಲಿ ಅಪಸ್ಮಾರ ರೋಗಿಗಳು ತಮ್ಮ ಆರೋಗ್ಯದ ಹಿತದೃಷ್ಠಿಯಿಂದಾಗಿ ಯಾವತ್ತೂ ಕುಟುಂಬಿಕರ ಮತ್ತು ಸ್ನೇಹಿತರ ಕಣ್ಗಾವಲಿನಲ್ಲಿಯೇ ಇರಬೇಕಾದ ಅಗತ್ಯತೆಯಂತೂ ಇದೆ.

ಕೊನೆ ಮಾತು:-  

ಅಪಸ್ಮಾರ ಎನ್ನುವುದು ಕೇವಲ ಒಂದು ರೋಗವಲ್ಲ. ಇದು ಹಲವಾರು ರೋಗಗಳಲ್ಲಿ ಕಾಣಿಸಿಕೊಳ್ಲುವ ಪ್ರಾಥಮಿಕ ಲಕ್ಷಣವಾಗಿದೆ. ಮೆದುಳಿಗೆ ಅಘಾತವಾದಾಗ ಮತ್ತು ಮೆದುಳಿನ ಕಾರ್ಯಕ್ಷಮತೆಗೆ ಧಕ್ಕೆಯಾದಾಗ ಅಥವಾ ಮೆದುಳಿನ ನರಮಂಡಲದ ನರಕೋಶಗಳ ಸಂವಹನದ ಕೊರತೆಯಿಂದಾಗಿ ಈ ಅಪಸ್ಮಾರ ರೋಗ ಕಾಣಿಸಿಕೊಳ್ಳುತ್ತದೆ. ಅಪರೂಪಕ್ಕೊಮ್ಮೆ ಬರುವ ಅಲ್ಪ ಪ್ರಮಾಣದ ಅಪಸ್ಮಾರವನ್ನು ನಿರಂತರವಾದ ಔಷಧಿ ಸೇವನೆ ಮತ್ತು ಆರೋಗ್ಯ ಪೂರ್ಣ ಜೀವನಶೈಲಿಯಿಂದ ಹತೋಟಿಯಲ್ಲಿಡಬಹುದು. ಇಂತಹ ರೋಗಿಗಳಲ್ಲಿ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಬದಲಾವಣೆಯ ಅವಶ್ಯಕತೆ ಇರುವುದಿಲ್ಲ. ಆದರೆ ತೀವ್ರತರಹದ ಅಪಸ್ಮಾರ ರೋಗವಿರುವವರು, ಪದೇ ಪದೇ ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ  ಹೆಚ್ಚಿರುತ್ತದೆ. ಇಂತಹಾ ರೋಗಿಗಳು ಯಾವತ್ತೂ ಕುಟುಂಬಿಕರ ಮತ್ತು ಸ್ನೇಹಿತರ ಹದ್ದಿನ ಕಣ್ಣಿನ ಕಣ್ಗಾವಲಿನಲ್ಲಿಯೇ ಇರಬೇಕಾದ ಅನಿವಾರ್ಯತೆ  ಇದೆ. ಇವರು ಔಷಧಿ ಸೇವನೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಬಹಳ ಶಿಸ್ತುಬದ್ಧರಾಗಿರಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಈ ರೋಗಿಗಳು ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಅಪಸ್ಮಾರ ರೋಗಿಗಳ ಬಗೆಗಿನ ಕೀಳರಿಮೆ ಯಾವಾತ್ತೂ ಒಳ್ಳೆಯದಲ್ಲ. ಈ ರೋಗ ಹೊಂದಿದ ರೋಗಿಗಳನ್ನು ಯಾವುದೇ ವಯಸ್ಸು, ಲಿಂಗ, ಜಾತಿ, ಭೇದವಿಲ್ಲದೆ ಪರಿಪೂರ್ಣ ಜೀವನ ನಡೆಸಲು ಅನುವು ಮಾಡಿಕೊಡಬೇಕು. ರೋಗಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ  ದೈರ್ಯ ತುಂಬಬೇಕು. ಆತನಲ್ಲಿನ ಸಕಾರಾತ್ಮಕ ವಿಚಾರಗಳ ಬಗ್ಗೆ ತಿಳಿಹೇಳಿ, ಆತ್ಮವಿಶ್ವಾಸ ತುಂಬಿ, ಒಳ್ಳೆಯ ವಿಚಾರಗಳನ್ನು ಜಾಗೃತಗೊಳಿಸಬೇಕು. ಅಂತಹ ರೋಗಿಗಳನ್ನು ಅತ್ಯಂತ ಪ್ರೀತಿ, ವಿಶ್ವಾಸ, ಆದರ ಮಮತೆ ಮತ್ತು ಕರುಣೆಯಿಂದ ನೋಡಿಕೊಳ್ಳಬೇಕು. ಅವರ ರೋಗದ ಬಗೆಗಿನ ತಿರಸ್ಕಾರ ಮತ್ತು ಜಿಗುಪ್ಸೆ ಯಾವತ್ತೂ ಸಲ್ಲದು. ಅಂತಹ ರೋಗಿಗಳಿಗೆ ಮಾನಸಿಕ ಧೈರ್ಯ, ಸಾಂತ್ವನ ನೀಡಿ ಜೀವನೋತ್ಸವದ ಬಗ್ಗೆ ಆರದಂತೆ ನೋಡಿಕೊಳ್ಳುವ ಸಾಮಾಜಿಕ ಹೊಣೆಗಾರಿಕೆ ನಮಗೆಲ್ಲರಿಗೂ ಇದೆ. ಆ ಮೂಲಕ ರೋಗಿಯಲ್ಲಿ ಆತ್ಮವಿಶ್ವಾಸ ಹೆಚ್ಚಿದಾಗ ಆತನಲ್ಲಿ ಜೀವನೋತ್ಸಾಹ ಉಕ್ಕಿದಲ್ಲಿ, ಖಂಡಿತವಾಗಿಯೂ ಅಪಸ್ಮಾರ ರೋಗದಿಂದ ಚೇತರಿಸಿಕೊಳ್ಳಲು ಸಹಾಯಕವಾಗಬಲ್ಲದು. ಹೀಗೆ ಅಪಸ್ಮಾರ ರೋಗಿಗಳಿಗೆ ಸಹಾಯನುಭೂತಿ, ಸ್ನೇಹ ಮತ್ತು ಸಹಕಾರ ನೀಡುವುದಲ್ಲಿಯೇ ಮನುಷ್ಯತ್ವದ ಸೆಲೆ ಅಡಗಿದೆ.

Also Read  ಈ 5 ರಾಶಿಯವರಿಗೆ ಪ್ರೇಮ ವಿವಾಹ, ಧನ ಪ್ರಾಪ್ತಿ,ಕಂಕಣ ಭಾಗ್ಯ ಕೂಡಿ ಬರುತ್ತದೆ

 

 ಡಾ|| ಮುರಲೀ ಮೋಹನ್ ಚೂಂತಾರು

       ಸುರಕ್ಷಾದಂತ ಚಿಕಿತ್ಸಾಲಯ

             ಹೊಸಂಗಡಿ – 671 323

               ಮೊ : 09845135787

 

 

error: Content is protected !!
Scroll to Top