ಪತ್ರಕರ್ತ ದುರ್ಗಾಕುಮಾರ್ ಗೆ ದಿ. ರಾಜೇಶ್ ಶಿಬಾಜೆ ಮಾಧ್ಯಮ ಗೌರವ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಸುಳ್ಯ . 11: ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಘಟಕದ ವತಿಯಿಂದ ನೀಡಲಾಗುವ ದಿ.ರಾಜೇಶ್ ಶಿಬಾಜೆ ಮಾಧ್ಯಮ ಗೌರವ ಪ್ರಶಸ್ತಿಗೆ ಸುಳ್ಯದ ಪ್ರತಿಭಾನ್ವಿತ ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಭಾಜನರಾಗಿದ್ದಾರೆ.

 

 

ಜನವಾಹಿನಿ ಪತ್ರಿಕೆಯ ವರದಿಗಾರರಾಗಿದ್ದ ರಾಜೇಶ್ ಶಿಬಾಜೆಯವರು ಹಲವು ವರ್ಷಗಳ ಹಿಂದೆ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಅವರ ಸ್ಮರಣಾರ್ಥ ಮಾಧ್ಯಮ ಗೌರವ ಪ್ರಶಸ್ತಿಯನ್ನು ಪತ್ರಕರ್ತರ ವೇದಿಕೆ ಪ್ರತಿವರ್ಷ ಕೊಡಲಾರಂಭಿಸಿತ್ತು.  ಈ ಬಾರಿಯ 2020 ರ ಸಾಲಿನ ಪ್ರಶಸ್ತಿಯನ್ನು ದುರ್ಗಾಕುಮಾರ್ ನಾಯರ್ ಕೆರೆಯವರಿಗೆ ನೀಡಲು ತೀರ್ಮಾನಿಸಲಾಗಿದೆ. ದುರ್ಗಾಕುಮಾರ್ ರವರು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಹಲವು ವರ್ಷಗಳಿಂದ ವರದಿಗಾರರಾಗಿದ್ದು , ಈಗ ಸುದ್ದಿ ಯೂಟ್ಯೂಬ್ ಚಾನೆಲ್ ಮುಖ್ಯಸ್ಥರಾಗಿದ್ದಾರೆ. ಸೃಜನಶೀಲ ಬರಹಗಾರರಾಗಿ ಹೆಸರು ಪಡೆದಿರುವ ಇವರ ಬರಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸುದ್ದಿ ದೀಪಾವಳಿ ವಿಶೇಷಾಂಕವನ್ನು ಪ್ರತಿ ವರ್ಷ ಮೌಲಿಕವಾಗಿ ರೂಪಿಸುತ್ತಿರುವ ಹಿರಿಮೆ ಅವರದು. ಸುದ್ದಿಯ ಮೂಲಕ ಗಿರೀಶ್ ಭಾರದ್ವಾಜ್, ಜಾಕೆ ಮಾಧವ ಗೌಡ ಮೊದಲಾದವರ ಕುರಿತು ಸಾಕ್ಷ್ಯ ಚಿತ್ರ ತಯಾರಿಸಿದ್ದಾರೆ. ಟಿ.ಜಿ.ಮುಡೂರು ಕುರಿತು ಕೃತಿ ಬರೆದಿದ್ದಾರೆ.

ಕನ್ನಡ ಪ್ರಭ ಪತ್ರಿಕೆಯ ಸುಳ್ಯದ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿರುವ ಅವರು ಹಿಂದೆ ವಿಜಯ ಕರ್ನಾಟಕ, ಪಯಸ್ವಿನಿ ಪತ್ರಿಕೆಯ ವರದಿಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.ಇವರು ಪತ್ನಿ ಪ್ರತಿಭಾ , ಪುತ್ರ ಅದ್ವೈತ್ ನಂದನ್, ಪುತ್ರಿ ಅದಿತಿ ಲಕ್ಷ್ಮಿ ಯವರೊಂದಿಗೆ ಎಲಿಮಲೆಯ ಜಬಳೆ “ಭೂಮಿಗೀತ” ದಲ್ಲಿ ನೆಲೆಸಿದ್ದಾರೆ.

 

 

error: Content is protected !!

Join the Group

Join WhatsApp Group