ಕೊೖಲ ಗ್ರಾ.ಪಂ.ಮಹಿಳಾ ಗ್ರಾಮಸಭೆ ► ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ,ಸೆ.23. ಕೊೖಲ ಗ್ರಾ.ಪಂ.ನ 2016-17ನೇ ಸಾಲಿನ ಮಹಿಳಾ ಗ್ರಾಮಸಭೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆ ವೇದಾವತಿಯವರಿಗೆ ಸನ್ಮಾನ ಕಾರ್ಯಕ್ರಮ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಿ ಬುಡಲೂರು ಮಾತನಾಡಿ, ಮಹಿಳೆಯರೂ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವಂತಾಗಬೇಕು. ಮಹಿಳೆಯರಿಗೆ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ತಾ.ಪಂ.ಸದಸ್ಯೆ ಜಯಂತಿ ಆರ್.ಗೌಡ ಮಾತನಾಡಿ, ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ಇದ್ದರೂ ಸಮಾಜದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮಹಿಳೆಯರಿಗೆ ಕಾನೂನು ವಿಷಯಗಳ ಬಗ್ಗೆ ಅರಿವು ನೀಡಲು ಹಾಗೂ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಲು ಸರಕಾರ ಮಹಿಳಾ ಗ್ರಾಮಸಭೆ ಆಯೋಜಿಸುತ್ತಿದೆ. ಇಂತಹ ಸಭೆಗಳಲ್ಲಿ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದುಕೊಳ್ಳುವ ಮೂಲಕ ಸಬಲೀಕರಣಗೊಳ್ಳಬೇಕೆಂದು ಹೇಳಿದರು.

ಅಂಗನವಾಡಿ ಮೇಲ್ವಿಚಾರಕಿ ಸುಜಾತರವರು, ಮಹಿಳೆಯರ ಪೌಷ್ಠಿಕತೆ, ಕೌಟುಂಬಿಕ ದೌರ್ಜನ್ಯ ತಡೆಗಟ್ಟುವಿಕೆ, ಕಾನೂನು ವಿಷಯಗಳ ಅರಿವು, ಮಹಿಳೆಯರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸಬಲೀಕರಣಗಳ ಬಗ್ಗೆ ಮಾಹಿತಿ ನೀಡಿದರು. ಕೊೖಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಸಂಪಾರವರು ಆರೋಗ್ಯ ಸುಧಾರಣೆ, ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.

2017ನೇ ಸಾಲಿನ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ, ರಾಜ್ಯಪ್ರಶಸ್ತಿ ಪಡೆದುಕೊಂಡಿರುವ ಏಣಿತಡ್ಕ (1) ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವೇದಾವತಿಯವರನ್ನು ಗ್ರಾ.ಪಂ.ವತಿಯಿಂದ ಸನ್ಮಾನಿಸಲಾಯಿತು. ಗ್ರಾ.ಪಂ.ಉಪಾಧ್ಯಕ್ಷೆ ವಿಜಯ ಅಂಬಾ, ಸದಸ್ಯರುಗಳಾದ ತಿಮ್ಮಪ್ಪ ಗೌಡ, ವಿನೋದರ ಮಾಳ, ಸುಧೀಶ್ ಪಟ್ಟೆ, ಸುಜಾತಾ ಶೆಟ್ಟಿ, ಪ್ರೇಮಾ, ಹೇಮಾ ಮೋಹನ್ದಾಸ್ ಶೆಟ್ಟಿ, ಹರಿಣಿ ಎ., ಲಲಿತಾ, ಬೀಪಾತುಮ್ಮರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಕುಡಿಯುವ ನೀರಿನ ಕೊರತೆ ಆಗದಂತೆ ಕ್ರಮ ವಹಿಸಿ - ನೀರಿನ ಸಮಸ್ಯೆ ಎದುರಾದರೆ ಅಧಿಕಾರಿಗಳೇ ಹೊಣೆ- ಜಿಲ್ಲಾಧಿಕಾರಿ ಎಚ್ಚರಿಕೆ

ಪಿಡಿಒ ನಮಿತಾ, ಕಳೆದ ಮಹಿಳಾ ಗ್ರಾಮಸಭೆಯ ವರದಿ ಮಂಡಿಸಿದರು. ಏಣಿತ್ತಡ್ಕ (1) ಅಂಗನವಾಡಿ ಕೇಂದ್ರದ ಸ್ತ್ರೀಶಕ್ತಿ ಸಂಘದ ಸದಸ್ಯೆ ಸುಶೀಲಾ ಓಕೆ ಸ್ವಾಗತಿಸಿ, ಇನ್ನೋರ್ವ ಸದಸ್ಯೆ ಮೋಹಿನಿ ಪಾನ್ಯಾಲು ವಂದಿಸಿದರು. ಮಮತಾ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top