(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ.19: ಭಟ್ಕಳದಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಇನ್ಸುಲೇಟರ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಭೀಮಾಶಂಕರ್ ಎಸ್. ನೇತೃತ್ವದ ಗಂಗೊಳ್ಳಿ ಪೊಲೀಸರ ತಂಡ ನಾಲ್ವರು ಆರೋಪಿಗಳನ್ನು ಮರವಂತೆಯ ಬಳಿ ಕಳೆದ ದಿನ ರಾತ್ರಿ ಕಾರ್ಯಾಚರಣೆ ಮಾಡಿ ಬಂಧಿಸಿದ್ದು, ವಾಹನ ಸಹಿತ 14.45 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಆರೋಪಿಗಳಾದ ಮಂಗಳೂರು ಹರೆಕಾಳದ ನಿವಾಸಿಗಳಾದ ಮಹಮ್ಮದ್ ಸಾಕೀರ್(24), ಮಹಮ್ಮದ್ ಜಾಫರ್ (32), ಬಂದೂರು ಕಿರಿಮಂಜೇಶ್ವರದ ಅಲಾಜ್ (20) ಹಾಗೂ ಹೊನ್ನಾವರ ತಾಲೂಕಿನ ಮಹಮ್ಮದ್ ಇಸೂಫ್ ಸಾಬ್ (45) ಎಂಬುವರನ್ನು ಬಂಧಿಸಿದ್ದಾರೆ. ವಾಹನದಲ್ಲಿ 20.630 ಗ್ರಾಂ. ತೂಕದ ಗಾಂಜಾ, ಬ್ಯಾಗ್, 5 ಮೊಬೈಲ್ಗಳು , ಇನ್ಸುಲೇಟರ್ ವಾಹನ ಸೇರಿದಂತೆ ಒಟ್ಟು 14.45 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









